ದಲಿತ ಮತ್ತು ಮರಾಠರ ನಡುವಿನ ಕದನಕ್ಕೆ ಮಹಾರಾಷ್ಟ್ರ ನಲುಗಿದೆ. ಪ್ರತಿಭಟನೆ ಹಿಂಸಾಚಾರವಾಗಿ ತಿರುಗಿ, ಇಂದು(ಜ.03) ಮಹಾರಾಷ್ಟ್ರ ರಾಜ್ಯಾದ್ಯಂತ ಬಂದ್ ಆಚರಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬಂದ್ ಗೆ ಕರೆ ನೀಡಿದ್ದರು. ಭೀಮ ಕೊರೆಗಾಂವ್ ಎಂಬಲ್ಲಿ ಜನವರಿ 1, 1818 ರಂದು ನಡೆದ ಕದನದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡುವುದಕ್ಕೆ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಕೈಜೋಡಿಸಿದ್ದ ಮೆಹರ್ ಸಮುದಾಯ ಈ ಹೋರಾಟದಲ್ಲಿ ಗೆಲುವು ಸಾಧಿಸಿತ್ತು. ಪೇಶ್ವೆಗಳ ವಿರುದ್ಧ, ದಲಿತ ಸಮುದಾಯ ಜಯಗಳಿಸಿದ ಈ ದಿನವನ್ನು ಭೀಮ ಕೊರೆಗಾಂವ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ.ಈ ದಿನದ 200 ನೇ ವರ್ಷಾಚರಣೆ ಜನವರಿ 1, 2018 ರಂದು ಪುಣೆಯಲ್ಲಿ ನಡೆಯುತ್ತಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಆರೋಪಿಸಿ, ದಲಿತ ಸಮುದಾಯದ ವಿರುದ್ಧ ಕೆಲ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯೇ ಹಿಂಸಾಚಾರವಾಗಿ ಬದಲಾದ ಪರಿಣಾಮ ಮಹಾರಾಷ್ಟ್ರದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿತ್ತು. <br />
