<p>ಮೈಸೂರು: ಹೆಚ್.ಡಿ.ಕೋಟೆಯಲ್ಲಿ ಕಳೆದ ಮಧ್ಯರಾತ್ರಿ ರೈತರೊಬ್ಬರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಅಡಿಕೆ ಗಿಡಗಳನ್ನು ಮುರಿದು ಹಾಕಿ, ಶೆಡ್ಗೆ ಹಾನಿ ಮಾಡಿದೆ.</p><p>ಡಿ.ಬಿ.ಕುಪ್ಪೆಯ ರೈತ ವೆಂಕಟೇಶ್ ಅವರ ಜಮೀನಿಗೆ ಆನೆ ನುಗ್ಗಿದೆ. ಆನೆ ತೋಟಕ್ಕೆ ಬಂದಿರುವುದನ್ನು ಅರಿತ ರೈತ ಕೂಡಲೇ ಲೈಟ್ ಹಾಕಿ ಶಬ್ದ ಮಾಡಿದ್ದಾರೆ. ಆದರೆ, ಕಾಡಾನೆ ಜಮೀನಿನಿಂದ ಹೋಗದೆ ರೈತನ ಮೇಲೆ ದಾಳಿ ಮಾಡಲು ಮನೆಯ ಬಳಿ ಬಂದಿದ್ದು, ಶೆಡ್ ಹಾನಿಗೊಳಿಸಿದೆ. </p><p>ಹೊಸೂರು, ಕಡೆಗದ್ದೆ, ಉಡಕನಮಳ, ಡಿ.ಪಿ.ಕುಪ್ಪೆ, ಗೋಳೂರು, ಜೋಮ್ಕೊಲ್ಲಿ ಮುಂತಾದ ಕಾಡಂಚಿನ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳವಿದೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಕಂದಕ, ರೈಲ್ವೆ ಕಂಬಿ ಅಥವಾ ಸೋಲಾರ್ ಬೇಲಿ ಅಳವಡಿಸಿ ಜನರ ಪ್ರಾಣ ಉಳಿಸಬೇಕು ಎಂದು ವೆಂಕಟೇಶ್ ಮನವಿ ಮಾಡಿದ್ದಾರೆ. </p><p>ಮನೆ ಮೇಲೆ ದಾಳಿ: ಡಿ.ಬಿ.ಕುಪ್ಪೆ ವ್ಯಾಪ್ತಿಯ ಮಚ್ಚೂರು ಗ್ರಾಮದಲ್ಲಿ ಬಲರಾಮ ಎಂಬವರ ಮನೆ ಮೇಲೂ ದಾಳಿ ಮಾಡಿದ ಆನೆ, ಹಂಚುಗಳನ್ನು ಪುಡಿ ಮಾಡಿದೆ. ಮನೆ ಹಿತ್ತಲಲ್ಲಿ ಕಾಣಿಸಿಕೊಂಡ ಆನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲಿ ಹಲವಾರು ಕುಟುಂಬಗಳು ಸಣ್ಣಸಣ್ಣ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದು, ಆತಂಕಗೊಂಡಿದ್ದಾರೆ.</p><p>ಇದನ್ನೂ ಓದಿ: ಶಿವಮೊಗ್ಗ: ಒಂಟಿ ಸಲಗ ದಾಳಿಗೆ VISL ವಸತಿಗೃಹದ ಕಾವಲುಗಾರ ಬಲಿ</a></p>