<p>ಕಾಪು(ಉಡುಪಿ): ಜನಪ್ರಿಯ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಸೋಮವಾರ ಭೇಟಿ ನೀಡಿದ್ದರು. ನೂತನವಾಗಿ ನಿರ್ಮಾಣಗೊಂಡಿರುವ ಮಾರಿಗುಡಿ ದೇಗುಲ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. </p><p>ದೇವಾಲಯದ ವತಿಯಿಂದ ರಾಜ್ ಬಿ. ಶೆಟ್ಟಿಯವರನ್ನು ಗೌರವಿಸಲಾಯಿತು. ಸದ್ಯ ತಮ್ಮ ಲಾಫಿಂಗ್ ಬುದ್ಧ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಸು ಫ್ರಂ ಸೋ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಾಜ್ ಶೆಟ್ಟಿ, ಸಿನಿಮಾ ಪ್ರಚಾರ ಸಲುವಾಗಿ ಕರಾವಳಿ ಪ್ರವಾಸದಲ್ಲಿದ್ದಾರೆ. </p><p>ಅಭಿಮಾನಿಗಳೇ ಸಿನಿಮಾ ನೋಡಿ ರಿವ್ಯೂ ನೀಡುವಂತೆ, ಚಿತ್ರ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿರುವ ರಾಜ್ ಬಿ. ಶೆಟ್ಟಿ ಸದ್ಯ ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.</p><p>ಇತ್ತೀಚೆಗಷ್ಟೇ ಕಾಪು ಹೊಸ ಮಾರಿಗುಡಿ ಆಕರ್ಷಕವಾಗಿ ನವೀಕರಣಗೊಂಡಿತ್ತು. ಕೋಟ್ಯಂತರ ರೂ. ವೆಚ್ಚದಲ್ಲಿ ಹೊಸ ಮಾರಿಗುಡಿಯನ್ನು ಭಕ್ತರ ದೇಣಿಗೆಯ ಸಹಕಾರದಿಂದ ನಿರ್ಮಿಸಲಾಗಿದೆ. ಮಾರ್ಚ್ನಲ್ಲಿ ಹೊಸಮಾರಿಗುಡಿ ನವೀಕರಣಗೊಂಡು ಲೋಕಾರ್ಪಣೆಗೊಂಡ ಬಳಿಕ ಇಲ್ಲಿಗೆ ಸೆಲೆಬ್ರಿಟಿಗಳ ದಂಡೇ ಹರಿದುಬರುತ್ತಿದೆ. </p><p>ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್ನ ನಟ ನಟಿಯರೂ ಇಲ್ಲಿಗೆ ಅಗಮಿಸಿ ದೇವಿದರ್ಶನ ಪಡೆಯುತ್ತಿದ್ದಾರೆ. ಇತ್ತೀಚೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕುಟುಂಬ ಸಮೇತ ಮಾರಿಗುಡಿಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದಹಾಗೆ, ಸೂರ್ಯಕುಮಾರ್ ಯಾದವ್ ಕಾಪುವಿನ ಅಳಿಯ ಎಂಬುದು ಗಮನಾರ್ಹ ಸಂಗತಿ.</p><p>ಇದನ್ನೂ ಓದಿ: ಉಡುಪಿಯಲ್ಲಿ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ; ದೈವಸ್ಥಾನದ ದರ್ಶನ- ವಿಡಿಯೋ - Suryakumar Yadav Visits Udupi</a></p>
