<p>ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆನಾಡ ಭಾಗದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಮೂಡಿಗೆರೆ ತಾಲೂಕಿನ ಗಂಗನಮಕ್ಕಿಯಲ್ಲಿ ಮಂಜುನಾಥ್ ಹಾಗೂ ಗಿರೀಶ್ ಅವರಿಗೆ ಸೇರಿದ ಕಟ್ಟಡವು ಭಾರಿ ಮಳೆಗೆ ಕುಸಿದು ಬಿದ್ದಿದೆ. ಈ ವೇಳೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಹತ್ತು ಮಂದಿ ಕಾರ್ಮಿಕರು ಹೊರ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. </p><p>ಒಂದು ಎಲೆಕ್ಟ್ರಿಕ್ ಅಂಗಡಿ ಜೊತೆಗೆ, ಒಂದು ಮಾರುತಿ ವ್ಯಾನ್, ಎರಡು ಬೈಕುಗಳು ಸೇರಿದಂತೆ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ನಿರಂತರವಾಗಿ ಈ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದಾಗಿ ಈ ರೀತಿ ಅನಾಹುತಗಳು ನಡೆಯುತ್ತಲೇ ಇದ್ದು, ಸಾರ್ವಜನಿಕರು ನಷ್ಟವನ್ನು ಅನುಭವಿಸುವಂತಾಗಿದೆ. </p><p>ಕಳೆದ ಮೂರು ದಿನಗಳಿಂದ ಮಲೆನಾಡು ಭಾಗ ಸೇರಿದಂತೆ ಹಲವಾರು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹೇಮಾವತಿ ನದಿ ತುಂಬಿ ಹರಿಯಲು ಪ್ರಾರಂಭಿಸಿದೆ. ಕೆಲವೆಡೆ ರಸ್ತೆ ಸಂಚಾರದಲ್ಲೂ ಅಸ್ತವ್ಯಸ್ತತೆ ಉಂಟಾಗಿದ್ದು, ಮಂಜು ಮುಸುಕಿನ ವಾತಾವರಣದ ಮಧ್ಯೆ ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ಚಾಲಕರಿಗೆ ನಿರ್ಮಾಣವಾಗಿದೆ.</p><p>ಶೃಂಗೇರಿ ತಾಲೂಕಿನ ಮೆಣಸೆ ಬಳಿಯ ಕಿಕ್ರೆ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದಿದೆ. ಈ ಘಟನೆಯಿಂದ ಶಾಲಾ, ಕಾಲೇಜು, ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ಹೋಗುವವರಿಗೆ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಮರ ತೆರವು ಕಾರ್ಯ ನಡೆಸಿದ್ದಾರೆ. ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗಲೇ ಬೃಹತ್ ಗಾತ್ರದ ಮರ ಬಿದ್ದಿದೆ. ಸ್ವಲ್ಪದರಲ್ಲೇ ಅನಾಹುತವೊಂದು ತಪ್ಪಿದಂತಾಗಿದೆ.</p><p>ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಮುಂದಿನ ಐದು ದಿನ ಭಾರಿ ಮಳೆ ಮುನ್ಸೂಚನೆ ; ಆರೆಂಜ್ ಅಲರ್ಟ್ ಘೋಷಣೆ - ORANGE ALERT</a></p>