<p>ಮೈಸೂರು: ತೆರಿಗೆ ಸಂಕಷ್ಟದಿಂದ ಸಣ್ಣ ವ್ಯಾಪಾರಿಗಳನ್ನು ಕಾಪಾಡಿ ಎಂದು ಪೋಸ್ಟರ್ ಹಿಡಿದು ಕೆಎಂಪಿಕೆ ಟ್ರಸ್ಟ್ನ ಸದಸ್ಯರು ಇಂದು ಅಭಿಯಾನ ನಡೆಸಿದರು.</p><p>ಕೆಎಂಪಿಕೆ ಟ್ರಸ್ಟ್ ಸದಸ್ಯರು ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಮುಂಭಾಗ ಮತ್ತು ಅಂಗಡಿಗಳ ಮುಂದೆ ತೆರಳಿ ಸಣ್ಣ ಅಂಗಡಿಗಳಿಗೂ ಜಿಎಸ್ಟಿ ನೋಟಿಸ್ ನೀಡಲಾಗಿದೆ. ಹೀಗಾದರೆ, ಸಣ್ಣ ವ್ಯಾಪಾರಿಗಳು ಜೀವನ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಇದೀಗ ಸಣ್ಣ ವ್ಯಾಪಾರಿಗಳಿಗೂ ಜಿಎಸ್ಟಿ ಹೆಸರಿನಲ್ಲಿ ಅಧಿಕ ತೆರೆಗೆ ವಿಧಿಸುವ ಮೂಲಕ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಕಿಡಿಕಾರಿದರು.</p><p>ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಜಿಎಸ್ಟಿ ಪಾವತಿಸುವಂತೆ ನೋಟಿಸ್ ನೀಡುವ ಮೂಲಕ, ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಕೆಲಸಕ್ಕೆ ಕೈ ಹಾಕಿರುವ ರಾಜ್ಯ ಸರ್ಕಾರದ ದಮನಕಾರಿ ಕ್ರಮ ಹಿಂಪಡೆಯಬೇಕೆಂದು ಒತ್ತಾಯಿಸಿದರು.</p><p>ವ್ಯಾಪಾರ ಮಾಡದಿದ್ದರೆ ಊಟಕ್ಕೂ ಪರದಾಡುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ನೀಡಿದ್ದು ಸರಿಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕು. ಹಾಗೆಯೇ ಜಿಎಸ್ಟಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಜಿಎಸ್ಟಿ ಸಂಸ್ಥೆ ನೋಟಿಸ್ ನೀಡಿದ್ದರೆ, ಸಂಪೂರ್ಣ ಮನ್ನಾ ಮಾಡಿ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.</p><p>ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪರಮೇಶ್ ಗೌಡ, ಅಭಿ, ಎಸ್.ಎನ್. ರಾಜೇಶ್ ಸೇರಿದಂತೆ ಮತ್ತಿತರರು ಇದ್ದರು.</p><p>ಇದನ್ನೂ ಓದಿ:ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಜಿಎಸ್ಟಿ ನೋಟಿಸ್: QR ಕೋಡ್ ಜಾಗದಲ್ಲಿ Cash Only ಬೋರ್ಡ್ ಪ್ರತ್ಯಕ್ಷ!</a></p><p>ಇದನ್ನೂ ಓದಿ: ಜಿಎಸ್ಟಿ ನೋಟಿಸ್ ನೆಪದಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ಸಹಾಯವಾಣಿ ಸಂಪರ್ಕಿಸಿ: ವಾಣಿಜ್ಯ ಇಲಾಖೆ</a></p>
