<p>ಮಂತ್ರಾಲಯ/ರಾಯಚೂರು: ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂಬ ಪ್ರಸಿದ್ಧಿಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ.</p><p>ತುಂಗಾತೀರದಲ್ಲಿ ನೆಲೆಸಿರುವ ರಾಯರ ಮಠಕ್ಕೆ ರಾಜ್ಯ, ಅಂತಾರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಭೇಟಿ ನೀಡಿ, ಶ್ರೀ ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನದ ದರ್ಶನ ಪಡೆಯುತ್ತಾರೆ.</p><p>ಈ ತಿಂಗಳಲ್ಲಿ ರಾಯರ ಉತ್ಸವದ ಹಿನ್ನೆಲೆಯಲ್ಲಿ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಕಾಣಿಕೆಯಾಗಿ ಕೋಟಿಗಟ್ಟಲೆ ರೂಪಾಯಿ ಮತ್ತು ಚಿನ್ನಾಭರಣವನ್ನು ಸಮರ್ಪಿಸಿದ್ದಾರೆ. </p><p>ಕಳೆದ 35 ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಜುಲೈ 29ರಂದು ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಒಟ್ಟು 5 ಕೋಟಿ 46 ಲಕ್ಷ 6 ಸಾವಿರದ 555 ರೂಪಾಯಿ ಜಮೆಯಾಗಿದೆ. ಇದರಲ್ಲಿ, 5,30,92,555 ನಗದು ನೋಟು ಹಾಗೂ 15,14,000 ನಾಣ್ಯಗಳು ಸಂಗ್ರಹವಾಗಿದೆ. ಅಲ್ಲದೆ, 1,820 ಗ್ರಾಂ ಬೆಳ್ಳಿ, 127 ಗ್ರಾಂ ಚಿನ್ನವನ್ನೂ ಕಾಣಿಕೆ ರೂಪದಲ್ಲಿ ಭಕ್ತರು ರಾಯರಿಗೆ ಅರ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p><p>ಕಾಣಿಕೆ ಹುಂಡಿ ಎಣಿಕೆಯಲ್ಲಿ ಕರಸೇವಕರು, ಮಠದ ಭಕ್ತರು, ಸಿಬ್ಬಂದಿ ಭಾಗವಹಿಸಿದ್ದರು. </p><p>ಇದನ್ನೂ ಓದಿ: ಒಂದೇ ತಿಂಗಳಲ್ಲಿ ಕೋಟ್ಯಾಧೀಶನಾದ ನಂಜುಂಡೇಶ್ವರ: ₹1.80 ಕೋಟಿ ಕಾಣಿಕೆ ಸಂಗ್ರಹ</a></p>