<p>ರಾಯಚೂರು: ಕೃಷ್ಣಾ ನದಿ ಮೈದುಂಬಿದ ಹಿನ್ನೆಲೆಯಲ್ಲಿ ನಾರಾಯಣಪುರ(ಬಸವಸಾಗರ) ಜಲಾಶಯಕ್ಕೆ ಲಕ್ಷಾಂತರ ಕ್ಯೂಸೆಕ್ಸ್ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.</p><p>ನಾರಾಯಣಪುರ ಜಲಾಶಯದ ಪ್ರಸ್ತುತ ಮಟ್ಟ 491.35 ಮೀಟರ್ ಇದೆ. ಕಳೆದ ಒಂದು ಗಂಟೆಯಲ್ಲಿ 1,35,000 ಕ್ಯೂಸೆಕ್ಸ್ ಒಳಹರಿವು ಬಂದಿದೆ. ಹಾಗೆಯೇ ಹೊರಹರಿವು 1,08,860 ಕ್ಯೂಸೆಕ್ಸ್ ಇದ್ದು, 25 ಕ್ರಸ್ಟ್ ಗೇಟ್ಗಳ ಮೂಲಕ ಹರಿಸಲಾಗುತ್ತಿದೆ . 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 29.278 ಟಿಎಂಸಿ ನೀರು ಸಂಗ್ರಹವಾಗಿದೆ.</p><p>ಅಲ್ಲದೇ ನಾರಾಯಣಪುರ ಬಲದಂಡೆ ಕಾಲುವೆಗೆ 1,200 ಕ್ಯೂಸೆಕ್ಸ್, ಎಡದಂಡೆ ನಾಲೆಗೆ 4000 ಕ್ಯೂಸೆಕ್ಸ್ ನೀರನ್ನು ಕಾಲುವೆ ಮೂಲಕ ಕೃಷಿ ಚಟುವಟಿಕೆಗಳಿಗೆ ಹರಿಸಲಾಗುತ್ತಿದೆ.</p><p>ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುಗಡೆಯಿಂದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದ್ದು, ನಡುಗಡ್ಡೆ ಪ್ರದೇಶಗಳಲ್ಲಿ ರಸ್ತೆ ಸಂಚಾರ ಕಡಿತವಾಗಲಿದೆ. ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳ ನದಿ ದಡದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.</p><p>ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಹರಿಬಿಟುವ ವೇಳೆ ನೀರು ಹಾಲಿನ ನೊರೆಯಂತೆ ಉಕ್ಕಿ ಹರಿಯುತ್ತಿದ್ದು, ಈ ರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. </p><p>ಇದನ್ನೂ ಓದಿ: ತುಂಗಭದ್ರಾ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಕಂಪ್ಲಿ ಸೇತುವೆ ಮುಳುಗಡೆ ಭೀತಿ, ಬಳ್ಳಾರಿ - ಕೊಪ್ಪಳ ನೇರ ಸಂಪರ್ಕ ಸ್ಥಗಿತ</a></p>