<p>ಚಿಕ್ಕಮಗಳೂರು: ಬೀದಿ ನಾಯಿಗಳ ದಾಳಿಯಿಂದ ಕಡವೆಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಡವೆಯೊಂದು ಆಹಾರದ ಹುಡುಕಾಟದಲ್ಲಿದ್ದಾಗ ಹತ್ತಾರು ಬೀದಿ ನಾಯಿಗಳು ಅದರ ಮೇಲೆ ದಾಳಿ ನಡೆಸಲು ಮುಂದಾಗಿದ್ದವು. ಈ ವೇಳೆ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಡವೆ ಗಾಯಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸ್ಥಳೀಯರು ತಕ್ಷಣ ಬೀದಿ ನಾಯಿಗಳನ್ನು ಹಿಮ್ಮೆಟ್ಟಿಸಿ ಗಂಭೀರವಾಗಿ ಗಾಯಗೊಂಡಿದ್ದ ಕಡವೆಯನ್ನು ರಕ್ಷಿಸಿದ್ದಾರೆ.</p><p>ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ಕಡವೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.</p><p>ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಒಂದು ಅಮೂಲ್ಯವಾದ ವನ್ಯಜೀವಿಯ ಜೀವ ಉಳಿದಿದೆ. ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ನೋಡಿ ಸಾರ್ವಜನಿಕರೇ ಬೆಚ್ಚಿ ಬೀಳುವಂಥಾಗಿದೆ. ಕೂಡಲೇ ಬೀದಿನಾಯಿಗಳ ಹಾವಳಿಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.</p><p>ಇದನ್ನೂ ಓದಿ : ಚಿಕ್ಕಮಗಳೂರು: ಎರಡು ಜೀವ ಬಲಿ ಪಡೆದ ಕಾಡಾನೆ ಸೆರೆ - WILD ELEPHANT CAPTURED</a></p>