<p>ಚಾಮರಾಜನಗರ : ಹಾಡಹಗಲೇ ಹುಲಿಗಳು ಕಾದಾಡಿ ಅದರಲ್ಲಿ ಒಂದು ವ್ಯಾಘ್ರ ತೀವ್ರವಾಗಿ ಗಾಯಗೊಂಡು ಜಮೀನಿನಲ್ಲಿ ಮಲಗಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ. ಕುಂದಕೆರೆ ಗ್ರಾಮದ ಮಂಚಣ್ಣ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾದಾಟದಲ್ಲಿ ಗಾಯಗೊಂಡ ಹುಲಿ ಕಂಡು ಜಮೀನಲ್ಲಿದ್ದ ರೈತರು ಭಯಗೊಂಡು ಕಾಲ್ಕಿತ್ತಿದ್ದಾರೆ. ಬಳಿಕ, ಅರಣ್ಯ ಇಲಾಖೆಗೆ ಈ ವಿಚಾರ ಮುಟ್ಟಿಸಿದ್ದಾರೆ. </p><p>ಈ ಕುರಿತು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, 'ಹುಲಿಗಳ ಕಾದಾಟದಲ್ಲಿ ಒಂದು ಹುಲಿ ಗಾಯಗೊಂಡು ಅಸ್ವಸ್ಥವಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ. ಇದೀಗ ಗಾಯಗೊಂಡ ಹುಲಿ ಮೇಲೆ ನಿಗಾ ಇಡಲಾಗಿದೆ. ಹುಲಿ ಸೆರೆ ಹಿಡಿದು ಚಿಕಿತ್ಸೆ ಕೊಡಲು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.</p><p>ಹುಲಿಗಳು ತಮ್ಮ ಸರಹದ್ದನ್ನು ನಿರ್ಮಾಣ ಮಾಡಿಕೊಳ್ಳಲಿದ್ದು, ಸರಹದ್ದಿಗಾಗಿ ಎರಡು ಗಂಡು ಹುಲಿಗಳು ಕಾದಾಡುತ್ತವೆ. ಹೀಗೆ ಕಾದಾಡುವಾಗ ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳಲಿವೆ. ಬಲಿಷ್ಠ ಹುಲಿ ಸರಹದ್ದನ್ನು ಪಡೆದರೆ, ಸೋತ ಹುಲಿಯು ಅನ್ಯ ಮಾರ್ಗವಿಲ್ಲದೇ ಬೇರೆ ಸರಹದ್ದನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.</p><p>ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿ ರಕ್ಷಣೆ : ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದು, ಹುಲಿಗೆ 11 ವರ್ಷ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.</p><p>ಬಂಡೀಪುರದ ಪಶು ವೈದ್ಯ ಡಾ. ವಾಸೀಂ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದ ಬಂಡೀಪುರ ಅರಣ್ಯಾಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ, ಗಾಯಗೊಂಡ ಹುಲಿಯನ್ನು ಸೆರೆ ಹಿಡಿದು, ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿಗೆ ರವಾನೆ ಮಾಡಿದ್ದಾರೆ. ಹುಲಿಯ ಕಾಲು ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿದೆ. </p><p>ಇದನ್ನೂ ಓದಿ : ಭದ್ರಾ ಅಭಯಾರಣ್ಯದಲ್ಲಿ 7 ವರ್ಷದ ಹುಲಿ ಸಾವು: ರೈತನ ಮೇಲೆ ಕಾಡಾನೆ ದಾಳಿ - TIGER DIES BHADRA SANCTUARY</a></p>
