<p>ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿನ ಕೃಷ್ಣಮಠದಲ್ಲಿ ಇಂದು ವಿಟ್ಲಪಿಂಡಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಹಾಪೂಜೆಗೂ ಮುನ್ನ ಗರ್ಭಗುಡಿಯಲ್ಲಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸಿದರು. </p><p>ಮಧ್ಯಾಹ್ನ 3 ಗಂಟೆಯ ಬಳಿಕ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ, ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯ ಭಕ್ತರು ಇದಕ್ಕೆ ಸಾಕ್ಷಿಯಾದರು. ದೇವರ ಮೆರವಣಿಗೆಯ ನಡುವೆ ಪುತ್ತಿಗೆ ಶ್ರೀಗಳು ರಥ ಬೀದಿಯಲ್ಲಿ ಭಕ್ತರತ್ತ ಪ್ರಸಾದ ರೂಪದಲ್ಲಿ ಉಂಡೆ ಚಕ್ಕುಲಿಗಳನ್ನು ಎಸೆದರು.</p><p>ಮೆರವಣಿಗೆಯ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು. ಈ ವೇಳೆ ಹುಲಿವೇಷಗಳ ಅಬ್ಬರದ ಕುಣಿತ ಪ್ರದರ್ಶನ ನಡೆಯಿತು.</p><p>ಸಾಂಪ್ರದಾಯಿಕ ಗೊಲ್ಲವೇಷಧಾರಿಗಳು ಕೃಷ್ಣಮಠದ ಮುಂಭಾಗ ಮೊಸರು ಗಡಿಗೆಗಳನ್ನು ಒಡೆಯುವುದು ವಿಟ್ಲಪಿಂಡಿಯ ಪ್ರಧಾನ ಸಂಪ್ರದಾಯ. ಅದರಂತೆ ಗೊಲ್ಲ ವೇಷಧಾರಿಗಳು ನಾಮುಂದು ತಾಮುಂದು ಎಂಬಂತೆ ಮೊಸರು ಗಡಿಗೆಗಳನ್ನು ಒಡೆದು ಸಂಭ್ರಮಿಸಿದರು. </p><p>ಬಳಿಕ ನಡೆದ ರಥೋತ್ಸವದಲ್ಲಿ ವಿವಿಧ ವೇಷಧಾರಿಗಳು ಉತ್ಸವಕ್ಕೆ ಮೆರುಗು ನೀಡಿದರು. ಕಲಾವಿದರು ಆರ್ಸಿಬಿ ಜರ್ಸಿ ಧರಿಸಿ ಕಪ್ ಗೆದ್ದ ಘಟನೆಯಂತೆ ಸಂಭ್ರಮಿಸಿದರು. ವಿಶೇಷವೆಂದ್ರೆ ಈ ವೇಳೆ ಆರ್ಸಿಬಿ ಆಟಗಾರರನ್ನು ಹೋಲುವಂತೆ ಕಲಾವಿದರು ಪೋಷಾಕು ಧರಿಸಿ ಗಮನ ಸೆಳೆದರು. </p><p>ಇದನ್ನೂ ಓದಿ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಗಣೇಶನಿಗೆ ಅದ್ಧೂರಿ ಮೆರವಣಿಗೆ: ಕೈಕೈ ಹಿಡಿದು ಕುಣಿದು ಕುಪ್ಪಳಿಸಿ ಗಣಪನ ನಿಮಜ್ಜನ</a></p>
