<p>ದಾವಣಗೆರೆ: ಕಾಡು ಹಂದಿಗಳ ಉಪಟಳ ತಡೆಯಲು ಜಮೀನಿನಲ್ಲಿ ಹಾಕಿದ್ದ ಬಲೆಯಲ್ಲಿ ಚಿರತೆ ಮರಿಯೊಂದು ಸಿಕ್ಕಿಹಾಕಿಕೊಂಡು, ಒದ್ದಾಡಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದ ಪಕ್ಕದಲ್ಲಿರುವ ಜಮೀನಿನಲ್ಲಿ ನಡೆದಿದೆ. </p><p>ರಾತ್ರಿ ವೇಳೆ ಮರಿಚಿರತೆ ಬಲೆಯಲ್ಲಿ ಸಿಲುಕಿಕೊಂಡಿದೆ. ಇದನ್ನು ಕಂಡ ರೈತರು ಗಾಬರಿಯಿಂದ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಈ ವೇಳೆ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಚಿರತೆ ಹೊರಬರಲು ಒದ್ದಾಡಿದ್ದು, ಸ್ಥಳೀಯರು ವಿಡಿಯೋ ಸೆರೆ ಹಿಡಿದಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. </p><p>ಇಲ್ಲಿ ಕಾಡು ಹಂದಿಗಳು ಮೆಕ್ಕೆಜೋಳ ಜಮೀನಿಗೆ ಲಗ್ಗೆ ಇಟ್ಟು ಇಡೀ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಇದರಿಂದ ರೋಸಿಹೋಗಿದ್ದ ರೈತರು ಹಂದಿಗಳಿಗೆ ಕಡಿವಾಣ ಹಾಕಲೆಂದು ಜಮೀನಿನಲ್ಲಿ ಬಲೆ ಹಾಕಿದ್ದರು. ಆದರೆ ಆ ಬಲೆಯಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿದೆ. ಒಂದೆಡೆ ಹಂದಿಗಳ ಕಾಟವಾದರೆ, ಇತ್ತ ಬಸವಾಪಟ್ಟಣ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ.</p><p>ಈ ಚಿರತೆ, ಹಂದಿ ಹಾವಳಿಯಿಂದ ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ರಾತ್ರಿ ಹೊತ್ತು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಚಿರತೆ, ಕಾಡು ಹಂದಿಗಳಿಗೆ ಉಪಟಳದಿಂದ ಮುಕ್ತಿ ನೀಡುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. </p><p>ಇದನ್ನೂ ಓದಿ: VIDEO: ಕಾರವಾರದಲ್ಲಿ ಕಾಳಿಂಗ ಸರ್ಪ, ಶಿರಸಿಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ</a></p>