<p>ಚಾಮರಾಜನಗರ : ರಾಜ್ಯದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಬೆಟ್ಟವನ್ನಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ, ಆರೋಗ್ಯ ಪ್ರಸಾದವೂ ಆರಂಭಗೊಂಡಿದೆ. ಈ ಬಗ್ಗೆ ರಿಪೋರ್ಟ್ ಇಲ್ಲಿದೆ. </p><p>ಅತಿಹೆಚ್ಚು ಭಕ್ತರು ಭೇಟಿ ನೀಡುವ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಈಗ ಬದಲಾವಣೆ ಪರ್ವ ಶುರುವಾಗಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಸಿರಿಧಾನ್ಯಗಳ ಪ್ರಸಾದ ಆರಂಭಿಸಿದೆ.</p><p>ಈಗಾಗಲೇ, ಪ್ರಾಧಿಕಾರದ ವತಿಯಿಂದ ಬಿಸಿಬೇಳೆ ಬಾತ್, ಉಪ್ಪಿಟ್ಟು, ತರಕಾರಿ ಪಲಾವ್, ಪುಳಿಯೋಗರೆ, ಪೊಂಗಲ್, ಸಾಂಬಾರ್, ಮಜ್ಜಿಗೆ, ಮೊಸರನ್ನ, ಅನ್ನ, ಸಾಂಬಾರ್, ರಸಂ, ಪಾಯಸ ಪ್ರಸಾದ ವಿತರಿಸಲಾಗುತ್ತಿದೆ. ಈಗ ಇದರ ಜೊತೆ ಸಿರಿಧಾನ್ಯಗಳಾದ ನವಣೆ, ಸಾಮೆಗಳಿಂದ ಬಾತ್, ಪಲಾವ್, ಅವಲಕ್ಕಿ ಪಾಯಸ ಕೊಡಲಾಗುತ್ತಿದ್ದು, ಸಿರಿಧಾನ್ಯ ಪ್ರಸಾದಕ್ಕೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಬೇಡಿಕೆ ಮೇರೆಗೆ ಹೆಚ್ಚು ಮಾಡಲು ಯೋಜಿಸಲಾಗಿದೆ. </p><p>ಮಲೆ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ವ್ಯಾಪಾರಿಗಳ ಸಭೆ ನಡೆಸಿ, ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿಯಿಂದ ತಯಾರಿಸಿರುವ ಕವರ್ಗಳನ್ನು ಕೊಡಲು ಮುಂದಾಗಿದೆ. </p><p>ಖಾಸಗಿ ಕಂಪನಿಯ ಮೂಲಕ ಪರಿಸರ ಸ್ನೇಹಿ ಕವರ್ ಪೂರೈಕೆ ಮಾಡಲು ಮುಂದಾಗಿದ್ದು, 180 ಡಿಗ್ರಿಯವರೆಗೂ ಬಿಸಿ ಪದಾರ್ಥ ಹಾಕಬಹುದಾಗಿದೆ. ಈ ಕವರ್ ಬಿಸಾಡಿದಾಗ 120 ದಿನಗಳಲ್ಲೇ ಗೊಬ್ಬರವಾಗಲಿದೆ.</p><p>ಒಟ್ಟಿನಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಸಂಸ್ಥೆಯಾದ ಮಾದಪ್ಪನ ಬೆಟ್ಟದಲ್ಲಿ ಆರೋಗ್ಯಕಾರಿ, ಪರಿಸರ ಸ್ನೇಹಿ ಬದಲಾವಣೆಗೆ ಭಕ್ತರು ಸಂತಸಗೊಂಡಿದ್ದಾರೆ.</p><p>ಇದನ್ನೂ ಓದಿ : ಹಾವೇರಿಯಲ್ಲಿ ದಸರಾ ಸಂಭ್ರಮ: ನವದುರ್ಗೆಯರ ದೇವಸ್ಥಾನದಲ್ಲಿ ಪ್ರತಿದಿನ ವಿಶೇಷ ಪೂಜೆ, ಹರಿದುಬರುತ್ತಿರುವ ಭಕ್ತಗಣ</a></p>
