<p>ಚಾಮರಾಜನಗರ : ಹನೂರು ತಾಲೂಕಿನ ಕಾಂಚಳ್ಳಿ ಸಮೀಪದ ಜಮೀನೊಂದರಲ್ಲಿ ಎರಡು ಚಿರತೆ ಮರಿಗಳು ಮಂಗಳವಾರ ಪ್ರತ್ಯಕ್ಷವಾಗಿವೆ. ಇದರಿಂದಾಗಿ ರೈತರು ಹೌಹಾರಿದ್ದಾರೆ. ಬಸಪ್ಪನ ದೊಡ್ಡಿ ಗ್ರಾಮದ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ರೈತರು ಎರಡು ಚಿರತೆ ಮರಿಗಳು ಕಂಡು ಹೆದರಿದ್ದಾರೆ. </p><p>ಚಿರತೆ ಮರಿಗಳು ಪತ್ತೆಯಾದ ಮಾಹಿತಿ ತಿಳಿದು ತಕ್ಷಣ ಹನೂರು ಬಫರ್ ಅರಣ್ಯ ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಿಗಳನ್ನು ಅದರ ತಾಯಿ ಚಿರತೆಯೊಂದಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ವೇಳೆ, ರೈತರು ಅದರ ತಾಯಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. </p><p>ಗುಂಡಾಪುರ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ ಈ ಭಾಗದಲ್ಲಿ ಈ ಹಿಂದೆಯೂ ಚಿರತೆ ಹಾವಳಿ ಹೆಚ್ಚಾಗಿತ್ತು. ಕುರಿ, ಮೇಕೆ ಹಾಗೂ ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನ ಬಲಿ ಪಡೆದ ನಿದರ್ಶನವೂ ಇದೆ. ಈ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರಿಂದಾಗಿ ಕರ್ನಾಟಕ ರಾಜ್ಯ ರೈತ ಸಂಘವು ಅದನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರಿಂದಾಗಿ ಸ್ಥಳದಲ್ಲಿ ಬೋನನ್ನೂ ಸಹ ಅಳವಡಿಸಲಾಗಿತ್ತು. ದುರಾದೃಷ್ಟವಶಾತ್ ಚಿರತೆ ಸಿಕ್ಕಿರಲಿಲ್ಲ. ಇದೀಗ ಮತ್ತೆ ಚಿರತೆ ಮರಿಗಳು ಕಂಡುಬಂದಿರುವುದರಿಂದಾಗಿ ಈ ಭಾಗದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.</p><p>ಇದನ್ನೂ ಓದಿ : ದಾವಣಗೆರೆ: ಕಾಡು ಹಂದಿಗಳ ಸೆರೆಗೆ ಹಾಕಿದ್ದ ಬಲೆಗೆ ಬಿದ್ದ ಚಿರತೆಮರಿ; ಅರಣ್ಯ ಸಿಬ್ಬಂದಿಯಿಂದ ರಕ್ಷಣೆ - LEOPARD TRAPPED</a></p>