<p>ದಾವಣಗೆರೆ: ಕೆಂಡ ತುಳಿಯುವಾಗ ಪಲ್ಲಕ್ಕಿ ಸಮೇತ ಮುಗುಚಿ ಕೆಂಡದ ಮೇಲೆ ಭಕ್ತರು ಬಿದ್ದಿರುವ ಘಟನೆ ಶುಕ್ರವಾರ ತಡರಾತ್ರಿ ಹೊನ್ನಾಳಿ ತಾಲೂಕಿನ ನೆಲವೊನ್ನೆ ಗ್ರಾಮದಲ್ಲಿ ನಡೆದಿದ್ದು, ಭಾರೀ ದುರಂತ ತಪ್ಪಿದೆ.</p><p>ಕರೇಗೌಡ ಎಂಬ ಭಕ್ತನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಸರಾ ಹಬ್ಬದ ಮರುದಿನ ನೆಲವೊನ್ನೆ ಗ್ರಾಮದ ಕರಿಯಮ್ಮ ದೇವಿಯ ಕೆಂಡೋತ್ಸವವನ್ನು ಪ್ರತಿವರ್ಷ ಅದ್ಧೂರಿಯಾಗಿ ಹಮ್ಮಿಕೊಂಡು ಬರಲಾಗುತ್ತದೆ. ಹಾಗೇ, ನಿನ್ನೆ ಶುಕ್ರವಾರ ಕರಿಯಮ್ಮ ದೇವಿಯ ಕೆಂಡೋತ್ಸವವನ್ನು ಆಚರಿಸಲಾಯಿತು. </p><p>ಈ ವೇಳೆ ದೇವಿಯನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡ ಭಕ್ತರು ಕೆಂಡದಲ್ಲಿ ತುಳಿಯುವಾಗ ಕಾಲು ಮುಗುಚಿ ಕೆಂಡದ ಮೇಲೆ ಭಕ್ತರು ಬಿದಿದ್ದಾರೆ. ಘಟನೆಯಲ್ಲಿ ಕರೇಗೌಡ ಅಲ್ಲದೇ ಇನ್ನೂ ಮೂರ್ನಾಲ್ಕು ಭಕ್ತರಿಗೆ ಸುಟ್ಟಗಾಯಗಳಾಗಿವೆ. ಕರೇಗೌಡ ಭಕ್ತ ಪಲ್ಲಕ್ಕಿಯ ಮುಂಭಾಗದಲ್ಲಿ ಇದ್ದ ಕಾರಣ ಗಂಭೀರ ಗಾಯಗಳಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. </p><p>ಇಂಥಹ ಘಟನೆಗಳು ಜಿಲ್ಲೆಯಲ್ಲಿ ಪ್ರತಿಬಾರಿ ನಡೆಯುತ್ತಿದ್ದು, ಜಿಲ್ಲಾಡಳಿತ ಜಾಗೃತಿ ಮೂಡಿಸಿ ತಿಳಿ ಹೇಳಿದೆ. ಆದರೆ ಗ್ರಾಮಸ್ಥರು ಮಾತ್ರ ಜಿಲ್ಲಾಡಳಿತದ ಮಾತುಗಳಿಗೆ ಸೊಪ್ಪು ಹಾಕುತ್ತಿಲ್ಲ. </p><p>ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ಮೂವರು ಸಾವು, ನಾಲ್ವರು ಕಣ್ಮರೆ: ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ</a> </p>