<p>ದಾವಣಗೆರೆ: ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲಾದ್ಯಂತ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹರಿಹರ ತಾಲೂಕಿನ ಸಂಕ್ಲಿಪುರ ಹಾಗೂ ಗುಳ್ಳದಹಳ್ಳಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡು, ಎರಡು ಗ್ರಾಮದ ಜನರಿಗೆ ತೊಂದರೆಯಾಗಿದೆ.</p><p>ನೂರಾರು ಎಕರೆ ಅಡಿಕೆ ತೋಟದಲ್ಲಿ ನೀರು ನಿಂತು, ಮಳೆ ರೈತನ ತಲೆಬಿಸಿ ಹೆಚ್ಚಿಸಿದೆ. ಭತ್ತ ಕೊಯ್ಲಿಗೂ ಮುನ್ನವೇ ನೆಲಕಚ್ಚಿದೆ. </p><p>ಸಂಕ್ಲಿಪುರ-ಗುಳ್ಳದಹಳ್ಳಿ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಬೃಹತ್ ಹಳ್ಳ ಮೈದುಂಬಿ ರೈತರ ಜಮೀನುಗಳಿಗೆ ನುಗ್ಗಿದೆ.</p><p>ಸಂಕ್ಲಿಪುರ-ಗುಳ್ಳದಹಳ್ಳಿ ಮಧ್ಯೆ ಹರಿಯುವ ಹಳ್ಳ ಸೇತುವೆಯನ್ನು ಆವರಿಸಿದೆ. ಪ್ರತೀ ಬಾರಿ ಮಳೆ ಜಾಸ್ತಿಯಾದರೆ ಈ ಸಮಸ್ಯೆ ಇಲ್ಲಿನ ಗ್ರಾಮಸ್ಥರಿಗೆ ಸಾಮಾನ್ಯವಾಗಿದೆ.</p><p>ಮೇಲ್ಸೇತುವೆ ಮಾಡಿ ಮಳೆ ನೀರು ಹಳ್ಳದಲ್ಲಿ ಸರಾಗವಾಗಿ ಹೋಗಲು ಅನುವು ಮಾಡಿಕೊಟ್ಟರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೇಲ್ಸೇತುವೆ ಮಾಡಿ ಎಂದು ಸಂಬಂಧಪಟ್ಟವರಿಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. </p><p>ರೈತ ಗಜೇಂದ್ರ ಎಂಬವರು ಪ್ರತಿಕ್ರಿಯಿಸಿ, "ಅಡಿಕೆ ತೋಟ ಜಲಾವೃತವಾಗಿವೆ. ಭತ್ತ ಕೈಗೆ ಬರುವ ಮುನ್ನವೇ ಕೊಚ್ಚಿ ಹೋಗಿದೆ. ಇದನ್ನು ಜನಪ್ರತಿನಿಧಿಗಳು ಬಂದು ನೋಡ್ಬೇಕು. ಸುಮಾರು 20-25 ವರ್ಷಗಳಿಂದ ಇದೇ ರೀತಿ ತೋಟಗಳು ಜಲಾವೃತವಾಗುತ್ತಿದೆ" ಎಂದರು.</p><p>ಇದನ್ನೂ ಓದಿ: ಧಾರವಾಡ, ದಾವಣಗೆರೆಯಲ್ಲಿ ಧಾರಾಕಾರ ಮಳೆ: 50ಕ್ಕೂ ಹೆಚ್ಚು ಮನೆಗಳಿಗೆ ಜಲದಿಗ್ಬಂಧನ</p>