<p>ಚಾಮರಾಜನಗರ: ಎಲ್ಲಿ ನೋಡಿದರಲ್ಲಿ ಜನಸಾಗರ, ಉಘೇ, ಉಘೇ ಮಾದಪ್ಪ ಎಂಬ ಜಯಘೋಷ, ಕುಣಿದು ಕುಪ್ಪಳಿಸಿ ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರು.. ಈ ದೃಶ್ಯಗಳು ಇಂದು ಮಲೆ ಮಹದೇಶ್ವರ ಸ್ವಾಮಿಯ ದೀಪಾವಳಿ ರಥೋತ್ಸವದಲ್ಲಿ ಕಂಡುಬಂತು.</p><p>ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸ್ಥಳ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ದೀಪಾವಳಿ ಮಹಾ ರಥೋತ್ಸವ ಜರುಗಿತು. ಕ್ಷೇತ್ರದಲ್ಲಿ ಕಳೆದ 18ರಂದು ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಇಂದು ರಥೋತ್ಸವದ ಮೂಲಕ ಸಂಪನ್ನಗೊಂಡಿತು. </p><p>ಜಾತ್ರೆಯ ಪ್ರಯುಕ್ತ ಬೆಟ್ಟಕ್ಕೆ ಸಹಸ್ರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲೇ ಆಗಮಿಸಿದ್ದರು. ಪ್ರಾಧಿಕಾರ ಕೂಡ ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಿತ್ತು.</p><p>ಕಳೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ 5 ಲಕ್ಷಕ್ಕೂ ಹೆಚ್ಚು ಲಾಡು ಮಾರಾಟವಾಗಿತ್ತು. ಈ ಬಾರಿ ಇನ್ನೂ ಹೆಚ್ಚು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಜಾತ್ರೋತ್ಸವಕ್ಕೂ ಮುನ್ನವೇ 4 ಲಕ್ಷ ಲಾಡು ತಯಾರಿಸಿ ದಾಸ್ತಾನಿರಿಸಲಾಗಿತ್ತು.</p><p>ಜಾತ್ರೋತ್ಸವಕ್ಕೆ ಕೆಎಸ್ಆರ್ಟಿಸಿ ವತಿಯಿಂದ 350 ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಶಕ್ತಿ ಯೋಜನೆ ಬಳಸಿಕೊಂಡ ಮಹಿಳೆಯರು ಮಾದಪ್ಪನ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದರು.</p><p>ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಓರ್ವ ಡಿವೈಎಸ್ಪಿ, ಆರು ಮಂದಿ ಇನ್ಸ್ಪೆಕ್ಟರ್, 17 ಸಬ್ ಇನ್ಸ್ಪೆಕ್ಟರ್, 35 ಎಎಸ್ಐ , 45 ಮಹಿಳಾ ಕಾನ್ಸ್ಟೇಬಲ್ಗಳು, 300 ಪೊಲೀಸ್ ಕಾನ್ಸ್ಟೇಬಲ್ಗಳು, 400 ಗೃಹ ರಕ್ಷಕ ದಳದ ಸಿಬ್ಬಂದಿ , 2 ಡಿಆರ್, 2 ಕೆಎಸ್ಆರ್ಪಿ ತುಕಡಿ, ಹಾಗೂ ಎನ್ಎಸ್ಎಸ್, ಎನ್ಸಿಸಿ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು.</p><p>ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಮಹಾರಥ ಮುನ್ನಡೆಸುವುದು ಈ ಯುವತಿಯರೇ: ಇದು ವಂಶಪಾರಂಪರ್ಯವಾಗಿ ಬಂದ ಸಂಪ್ರದಾಯ!</a></p>
