<p>ಮಂಡ್ಯ: ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ 4 ವರ್ಷದ ಹೆಣ್ಣು ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲವು ದಿನಗಳಿಂದ ಸಾಕು ಪ್ರಾಣಿಗಳ ಕೊಂದು ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಬಲೆಗೆ ಬೋನಿಗೆ ಬಿದ್ದಿದೆ. </p><p>ಹಲವು ತಿಂಗಳಿಂದ ಚಿರತೆಯು ಗ್ರಾಮದಲ್ಲಿನ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿತ್ತು. ಹೀಗಾಗಿ, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಬೋನ್ ಇರಿಸಲಾಗಿತ್ತು. ರಾತ್ರಿ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆ ಅರಣ್ಯ ಸಿಬ್ಬಂದಿ ಇರಿಸಿದ್ದ ಬೋನಿನೊಳಗೆ ಬಿದ್ದಿದೆ. </p><p>ಇನ್ನು, 3-4 ಚಿರತೆಗಳು ಗ್ರಾಮದಲ್ಲಿ ಉಪಟಳ ನೀಡುತ್ತಿರುವುದರಿಂದಾಗಿ ಜನರಲ್ಲಿ ಆತಂಕ ಎದುರಾಗಿದೆ. ಬೋನಿಗೆ ಬಿದ್ದ ಚಿರತೆ ನೋಡಲು ಆಳಿಗೊಬ್ಬರಂತೆ ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನರ ಗದ್ದಲ ಹೆಚ್ಚಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ. </p><p>ಈ ಕುರಿತು ಗ್ರಾಮಸ್ಥರಾದ ವಸಂತ ಅವರು ಮಾತನಾಡಿದ್ದು, 'ಶಾಲೆ ಬಿಟ್ಟ ನಂತರ ಮಕ್ಕಳು ನಾವಿರುವ ಜಮೀನಿನ ಬಳಿಗೆ ಬರುತ್ತಾರೆ. ಆಗ ಮಕ್ಕಳನ್ನು ಚಿರತೆ ಹೊತ್ತುಕೊಂಡು ಹೋದ್ರೆ ನಮ್ಮ ಕಥೆ ಏನು?. ಈ ಬಗ್ಗೆ ಗಮನಹರಿಸಿ ಚಿರತೆಗಳನ್ನು ಸೆರೆಹಿಡಿಯಬೇಕು. ಇನ್ನೂ ನಾಲ್ಕು ಚಿರತೆಗಳಿವೆ' ಎಂದು ಹೇಳಿದ್ದಾರೆ. </p><p>ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಅಕ್ಟೋಬರ್ 22, 2025 ರಂದು ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು. ರಾಜೇಶ್ ಎಂಬುವವರ ಇಟ್ಟಿಗೆಗೂಡಿನ ಬಳಿ ಅ. 21ರ ಮುಂಜಾನೆ 4 ಮತ್ತು 4:30ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು. </p>
