<p>ಬೀದರ್: ಸಿಖ್ ಧರ್ಮ ಸಂಸ್ಥಾಪಕರಾದ ಶ್ರೀ ಗುರುನಾನಕ ದೇವ್ ಮಹಾರಾಜರ ಜಯಂತ್ಯುತ್ಸವ ನಗರದಲ್ಲಿ ಬುಧವಾರ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆಯಿಂದ ಸಂಜೆಯವರೆಗೆ ಇಲ್ಲಿನ ಗುರುದ್ವಾರದಲ್ಲಿ ದರ್ಶನ ಪಡೆದ ಭಕ್ತರು, ಪವಿತ್ರ ಅಮೃತ ಕುಂಡದಲ್ಲಿನ ನೀರು ಸೇವಿಸಿ ಕೃತಾರ್ಥರಾದರು. </p><p>ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಸಿಖ್ಖರ ತಂಡಗಳು ಬುಧವಾರ ನಗರಕ್ಕೆ ಆಗಮಿಸಿದ್ದವು. ಅಂತೆಯೇ ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಸಮಿತಿ ಪ್ರಮುಖರು ಸಾಕಷ್ಟು ವ್ಯವಸ್ಥೆ ಮಾಡಿದ್ದರು. ಎಲ್ಲ ಭಕ್ತರಿಗೂ ಅಚ್ಚುಕಟ್ಟಾಗಿ ವಿಶಿಷ್ಟ ಖಾದ್ಯಗಳ ಗುರು ಕಾಲ ಲಂಗರ್ (ಅನ್ನ ದಾಸೋಹ) ವ್ಯವಸ್ಥೆ ಮಾಡಲಾಗಿತ್ತು.</p><p>ಗುರುದ್ವಾರದಿಂದ ಬುಧವಾರ ಸಂಜೆ ಆರಂಭವಾದ ವೈಭವದ ಮೆರವಣಿಗೆ ಉದಗೀರ್ ರಸ್ತೆಯ ಪ್ರಮುಖ ಮಾರ್ಗದಿಂದ ಡಾ. ಅಂಬೇಡ್ಕರ್ ವೃತ್ತದವರೆಗೆ ತೆರಳಿ ರಾತ್ರಿ ಪುನಃ ಗುರುದ್ವಾರಕ್ಕೆ ತಲುಪಿ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ 'ಬೋಲೆ ಸೋ ನಿಹಾಲ್ ಸತ್ಶ್ರೀ ಅಕಾಲ್' ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.</p><p>ಸಾಹಸಮಯ ಪ್ರದರ್ಶನ: ಸಿಖ್ ಸಮುದಾಯದ ಗುರುವೆನಿಸಿದ 'ಗುರುಗ್ರಂಥ ಸಾಹೀಬ್' ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಹೈದರಾಬಾದ್, ನಾಂದೇಡ್, ಕರೀಮನಗರ, ನಿಜಾಮಬಾದ್, ವಾರಂಗಲ್ ಸೇರಿ ದಕ್ಷಿಣ ಭಾರತದ 15ಕ್ಕೂ ಹೆಚ್ಚು ಗುರುದ್ವಾರಗಳಿಂದ ಆಗಮಿಸಿದ್ದ ನಿಶಾನ್ಸಾಬ್(ಚೌಕಿ)ಗಳು ಮೆರವಣಿಗೆ ವೈಭವ ಹೆಚ್ಚಿಸಿದವು. ಮುಂಚೂಣಿಯಲ್ಲಿದ್ದ ಪಾಂಚ್ಪ್ಯಾರೇ ವೇಷಧಾರಿಗಳು ಗಮನ ಸೆಳೆದರು. ಯುವಕರು ಅಲ್ಲಲ್ಲಿ ತಲ್ವಾರ್, ಲಾಂಚಾ, ಲಾಠಿ ತಿರುಗಿಸಿ ಸಾಹಸ ಪ್ರದರ್ಶನ ನೀಡಿದರು.</p><p>ನಾನಾ ಕಡೆಗಳಿಂದ ಆಗಮಿಸಿದ್ದ ಸಿಖ್ ಭಕ್ತರು ಗುರುದ್ವಾರ ಪರಿಸರದಲ್ಲಿ ವಿವಿಧ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. </p><p>ಇದನ್ನೂ ಓದಿ: ಚಂಪಾ ಷಷ್ಠಿ ಜಾತ್ರೆಯ ಪೂರ್ವಭಾವಿ ಆರಂಭ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಥಗಳಿಗೆ ಗೂಟ ಪೂಜೆ</a></p>
