<p>ಚಾಮರಾಜನಗರ: ಕಳೆದ ಹಲವು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿಯಲ್ಲಿ ಇಂದು ಬೆಳಗಿನ ಹೊತ್ತಲ್ಲಿ ಚಿರತೆ ಬೋನು ಸೇರಿತು.</p><p>ಸೆರೆಯಾದ ಗಂಡು ಚಿರತೆಗೆ 4-5 ವರ್ಷಗಳಾಗಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಬೇರಂಬಾಡಿ ಗ್ರಾಮದ ಶಿವಶಂಕರಪ್ಪ ಎಂಬವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನಿರಿಸಲಾಗಿತ್ತು. ಮೇಕೆ ಆಸೆಯಿಂದ ಬಂದ ಅದು ಬೋನಿನಲ್ಲಿ ಸೆರೆಯಾಗಿದೆ. </p><p>ಬೇರಂಬಾಡಿ ಸುತ್ತಮುತ್ತಲು ಚಿರತೆ ಉಪಟಳ ಕೊಡುತ್ತಿತ್ತು. ಕೆಲವು ದಿನಗಳ ಹಿಂದೆಯೂ ಮೂರು ಕುರಿಗಳು ಚಿರತೆಗೆ ಆಹಾರವಾಗಿದ್ದವು. </p><p>"ಈ ಚಿರತೆಯನ್ನು ಬಂಡೀಪುರ ಅಭಯಾರಣ್ಯದ ಕಲ್ಕೆರೆ ಪ್ರದೇಶದ ದಟ್ಟಾರಣ್ಯದಲ್ಲಿ ಬಿಡಲಾಗುವುದು. ಕಳೆದ ಹಲವು ದಿನಗಳಿಂದ ರೈತರಿಗೆ ಉಪಟಳ ನೀಡುತ್ತಿದ್ದ ಕಾರಣ ಬೋನಿರಿಸಿದ್ದೆವು" ಎಂದು ಆರ್ಎಫ್ಒ ಪುನೀತ್ ತಿಳಿಸಿದರು. </p><p>ಮದ್ದೂರು ವಲಯದ ಅರಣ್ಯಾಧಿಕಾರಿಗಳು ಶಿವಶಂಕರಪ್ಪ ಎಂಬ ರೈತರ ಜಮೀನಿನಲ್ಲಿ ಬೋನಿರಿಸಿ ಒಳಗೆ ಮೇಕೆ ಕಟ್ಟಿದ್ದರು. ಇದೀಗ ಚಿರತೆ ಬೋನಿಗೆ ಬಿದ್ದಿರುವುದರಿಂದ ರೈತರ ಆತಂಕ ದೂರವಾಗಿದೆ. ಇದೇ ವೇಳೆ, ಕಾಡುಪ್ರಾಣಿಗಳು ನಾಡಿಗೆ ಬರದಂತೆ ಕ್ರಮ ವಹಿಸಬೇಕು ಎಂಬುದು ಸ್ಥಳೀಯ ರೈತ ಮುಖಂಡರ ಒತ್ತಾಯ.</p><p>ಇದನ್ನೂ ನೋಡಿ: ಬನ್ನೇರುಘಟ್ಟ ಸಫಾರಿ ವೀಕ್ಷಣೆ ವೇಳೆ ಚಿರತೆ ದಾಳಿ: ಮಹಿಳೆಯ ಕೈಗೆ ಗಾಯ; ಆತಂಕಗೊಂಡ ಜನರು!</a></p>
