<p>ಉಡುಪಿ: ಸಂಕ್ರಾಂತಿ ಎಂದರೆ ಸಂಭ್ರಮ. ಉಡುಪಿಯಲ್ಲಿ ಮಾತ್ರ ದುಪ್ಪಟ್ಟು ಸಂಭ್ರಮ. ಇದೇ ಸಂಕ್ರಾಂತಿಗೆ ಆಚಾರ್ಯ ಮದ್ವರು ಕೃಷ್ಣನನ್ನು ಪ್ರತಿಷ್ಠಾಪಿಸಿದರಂತೆ. ಇದೇ ನೆನಪಿನಲ್ಲಿ ವರ್ಷಂಪ್ರತಿ ಸಾವಿರಾರು ಜನರು ಮೂರು ರಥ ಎಳೆದು, ಕೃಷ್ಣ ಭಕ್ತಿಯಲ್ಲಿ ತಲ್ಲಿನರಾಗುತ್ತಾರೆ.</p><p>ಉಡುಪಿ ಕೃಷ್ಣ ಉತ್ಸವ ಪ್ರಿಯ. ಮಳೆಗಾಲ ಹೊರತುಪಡಿಸಿದರೆ ಇಲ್ಲಿ ಪ್ರತಿದಿನ ರಥೋತ್ಸವ ನಡೆಯುತ್ತದೆ. ರಥಗಳು ಇಲ್ಲಿನ 8 ಮಠಗಳ ಸುತ್ತಲೂ ಪ್ರದಕ್ಷಿಣೆ ಬರುವುದು ಪದ್ಧತಿ. ಮಕರ ಸಂಕ್ರಾಂತಿಗೆ ನಡೆಯುವ ಮೂರು ತೇರಿನ ಉತ್ಸವ ಕೃಷ್ಣನೂರಿನ ಕೀರ್ತಿ ಕಳಸ, ಉತ್ಸವದ ಸಂಭ್ರಮಕ್ಕೆ ನೂರಾರು ಜನ ಭಾಗಿಯಾದರು.</p><p>ಮಕರ ಸಂಕ್ರಾಂತಿಯ ವೇಳೆ ಸಪ್ತೋತ್ಸವ ನಡೆಯುತ್ತದೆ. ಒಟ್ಟು ಏಳು ದಿನಗಳ ಈ ಉತ್ಸವದಲ್ಲಿ ಮೂರು ತೇರಿನ ಮೆರವಣಿಗೆಯೇ ಹೈಲೈಟ್! ಕರಾವಳಿಯಲ್ಲಿ ಒಂದು ದಿನ ಮುಂಚಿತವಾಗಿ ಸಂಕ್ರಾಂತಿ ಆಚರಿಸಲಾಯಿತು. ಎಂಟು ಶತಮಾನದ ಹಿಂದೆ ಆಚಾರ್ಯ ಮಧ್ವರು ಸಂಕ್ರಾಂತಿಯಂದೇ ಕೃಷ್ಣದೇವರನ್ನು ಪ್ರತಿಷ್ಠಾಪಿಸಿದರು ಎನ್ನುವುದು ಇತಿಹಾಸ. ಇದೇ ಕಾರಣಕ್ಕೆ ಪ್ರತಿ ಸಂಕ್ರಾಂತಿ ಎಂದು ಕೃಷ್ಣದೇವರ ಮಹೋತ್ಸವ ನಡೆಯುತ್ತದೆ.</p><p>ಸಂಕ್ರಾಂತಿ ಪ್ರಯುಕ್ತ 3 ರಥಗಳನ್ನು ಏಕಕಾಲದಲ್ಲಿ ಎಳೆಯುತ್ತಾರೆ. ಈ ಮಹೋತ್ಸವ ಆರಂಭಕ್ಕೂ ಮುನ್ನ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ. ಬಳಿಕ ಬ್ರಹ್ಮರಥ ಗರುಡರಥ ಮಹಾಪೂಜಾ ರಥಗಳಲ್ಲಿ, ಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೇಶ್ವರ ದೇವರನ್ನು ಇರಿಸಿ ಪ್ರದಕ್ಷಿಣೆ ತರುವುದು ಸಂಪ್ರದಾಯ. ಏಕಕಾಲದಲ್ಲಿ ಸಮಾನಾಂತರವಾಗಿ ನಿಲ್ಲುವ ಮೂರು ರಥಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ರಾಜ್ಯದ ನಾನಾ ಮೂಲೆಗಳಿಂದ ಭೇಟಿ ಕೊಡುತ್ತಾರೆ.</p><p>ಇದು ಪುತ್ತಿಗೆ ಪರ್ಯಾಯದ ಸಮಾಪ್ತಿಯೂ ಹೌದು. ಜನವರಿ 18 ರಿಂದ ಶಿರೂರು ಮಠದ ಪರ್ಯಾಯ ಆರಂಭ. ಪರ್ಯಾಯ ಮಹೋತ್ಸವದ ಹೊಸ್ತಿಲಲ್ಲಿ ನಡೆದ ಮೂರುತೇರಿನ ಉತ್ಸವ ನಿಜಕ್ಕೂ ಹಬ್ಬದ ವಾತಾವರಣವನ್ನೇ ದೇವಾಲಯಗಳ ನಗರಿಯಲ್ಲಿ ಸೃಷ್ಟಿಸಿತು.</p><p>ಇದನ್ನೂ ಓದಿ: ಉತ್ಸವಪ್ರಿಯ ಉಡುಪಿ ಕೃಷ್ಣನಿಗೆ ನೂರಾರು ಅಲಂಕಾರ: ಯಕ್ಷಕೃಷ್ಣನಾಗಿ ಮಿಂಚುತ್ತಿರುವ ಪೊಡವಿಗೊಡೆಯ</a></p>
