<p>ಚಾಮರಾಜನಗರ: ಆಹಾರ ಅರಸಿ ಜಮೀನುಗಳತ್ತ ಬಂದಿರುವ ಕಾಡಾನೆಯೊಂದು ಬಳಿಕ ಗುಂಡ್ಲುಪೇಟೆ ಪಟ್ಟಣದೊಳಗೆ ಪ್ರವೇಶಿಸಿ ರೌಂಡ್ಸ್ ಹಾಕಿರುವ ಘಟನೆ ಗುರುವಾರ ಮುಂಜಾನೆ 3.30 ರ ಸುಮಾರಿಗೆ ನಡೆದಿದೆ.</p><p>ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ಬೀದಿಯಲ್ಲಿ ಸಂಚರಿಸಿ ಮನೆ ಮುಂಭಾಗವಿದ್ದ ದ್ವಿಚಕ್ರವಾಹನವನ್ನು ಜಖಂಗೊಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆನೆ ಬಂದ ವಿಚಾರ ತಿಳಿದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.</p><p>ದಿಢೀರ್ ಎಂಟ್ರಿ ಕೊಟ್ಟ ಕಾಡಾನೆ ಕಂಡು ನಾಯಿಗಳು ಬೊಗಳಿದ ಹಿನ್ನೆಲೆ ಅವುಗಳನ್ನು ಅಟ್ಟಿಸಿಕೊಂಡು ಬಂದು ಬೈಕ್ಗಳನ್ನು ಜಖಂ ಮಾಡಿದೆ. ಆ ಹೊತ್ತಿನಲ್ಲಿ ಸಾರ್ವಜನಿಕರ ಓಡಾಟ ಇಲ್ಲದ ಹಿನ್ನೆಲೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕಿರಣಗೌಡ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಆನೆ ಓಡಾಟದ ದೃಶ್ಯ ಸೆರೆಯಾಗಿದೆ.</p><p>ಅರಣ್ಯ ಇಲಾಖೆ ಕಾರ್ಯಾಚರಣೆ : ಗುಂಡ್ಲುಪೇಟೆ ಪಟ್ಟಣದಲ್ಲಿ ಕಾಣಿಸಿಕೊಂಡ ಕಾಡಾನೆ ಸದ್ಯ ಕುಂದಕೆರೆ ವಲಯದ ಹೆಗ್ಗವಾಡಿ ಗುಡ್ಡದಲ್ಲಿದ್ದು, ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ನಡೆದಿದೆ. </p><p>ಈ ಕುರಿತು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಅವರು ಮಾತನಾಡಿದ್ದು, 'ಕಾಡಾನೆ ಯಾವ ಭಾಗದಿಂದ ಬಂದಿದೆ ಎಂಬುದು ಖಚಿತವಾಗಿಲ್ಲ. ಮೊದಲಿಗೆ ಪಟ್ಟಣದಲ್ಲಿ ಕಾಣಿಸಿಕೊಂಡು ಬಳಿಕ ದಾರಿ ಬೇಗೂರು, ಆ ನಂತರ ಯರಿಯೂರು ಕಡೆಗೆ ಹೋಗಿತ್ತು. ಸದ್ಯ ಹೆಗ್ಗವಾಡಿಯ ಕಾಡಂಚಿನಲ್ಲಿ ಬೀಡು ಬಿಟ್ಟಿದೆ. ಕಾಡಿಗಟ್ಟಲು ಕಾರ್ಯಾಚರಣೆ ನಡೆದಿದೆ' ಎಂದು ತಿಳಿಸಿದ್ದಾರೆ.</p><p>ಇದನ್ನೂ ಓದಿ : ಏಕಕಾಲದಲ್ಲಿ ರಸ್ತೆ ದಾಟಿದ 17ಕ್ಕೂ ಹೆಚ್ಚು ಕಾಡಾನೆಗಳು: 600ಕ್ಕೂ ಹೆಚ್ಚು ಅಡಿಕೆ ಮರ ನೆಲಸಮ</a></p>
