<p>ತುಮಕೂರು: ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಚೆಕೊಪ್ಪಲು-ಕರೀಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ಒಂದು ತಿಂಗಳಿನಿಂದ ಇಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು. </p><p>ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆದರೆ, ಈವರೆಗೆ ಚಿರತೆ ಹಾವಳಿಯಿಂದ ಆದ ಜಾನುವಾರು ನಷ್ಟಕ್ಕೆ ಪರಿಹಾರ ನೀಡದಿರುವ ಬಗ್ಗೆ ರೈತರು ಪ್ರಶ್ನಿಸಿದಾಗ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪ್ರತಿಭಟನೆಗೆ ಕಾರಣವಾಯಿತು. ಹೊನ್ನವಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. </p><p>ಈವರೆಗೆ ರೈತ ಮಂಜುನಾಥ್ ಅವರ ಎಂಟು ಕುರಿ, ಶರತ್ ಅವರ ಎರಡು ಕುರಿ ಹಾಗೂ ರಾಜಣ್ಣ ಅವರ ಎಂಟು ಕುರಿಗಳು ಚಿರತೆ ದಾಳಿಗೆ ಬಲಿಯಾಗಿದ್ದು, ಯಾವುದೇ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ದೂರಿದರು. </p><p>ಚಿರತೆ ಹಿಡಿಯಲು ಬೋನು ಇಡುವಂತೆ ಅರಣ್ಯ ಇಲಾಖೆಯನ್ನು ಕೇಳಿದರೆ ರೈತರೇ ಮುಂದಾಗಿ ಬೋನು ವ್ಯವಸ್ಥೆ ಮಾಡಿಕೊಳ್ಳಿ, ನಿಮ್ಮದೇ ವಾಹನದಲ್ಲಿ ಬೋನ್ ತೆಗೆದುಕೊಂಡು ಹೋಗಿ ಎಂದು ತಿಳಿಸುತ್ತಾರೆ. ಚಿರತೆ ಕಾಣಿಸಿಕೊಂಡಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮೇಲಧಿಕಾರಿಗಳು ಸಹ ಈ ಭಾಗಕ್ಕೆ ಬಂದು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಿಲ್ಲ. ನಮಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. </p><p>ಇದನ್ನೂ ಓದಿ: Gen-Zಗಳಷ್ಟೇ ಅಲ್ಲ ಉಗ್ರರೂಪ ಪಡೆದ ಜೆನ್-ಜಿ ಹುಲಿ ಮತ್ತು ಚಿರತೆಗಳು; ಬದಲಾದ ಮಾನವ-ವನ್ಯಜೀವಿ ಸಂಘರ್ಷದ ಸ್ವರೂಪ</a></p>
