<p>ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ನುಗ್ಗಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರೊಂದಿಗೆ ಹಿಮ್ಮೆಟ್ಟಿಸಿದ ಘಟನೆ ಬುಧವಾರ ನಡೆಯಿತು. </p><p>ಕಬಿನಿ ಹಿನ್ನೀರಿನ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಂತೆ ಇರುವ ಮೊಳೆಯೂರು ಅರಣ್ಯ ಪ್ರದೇಶದಿಂದ ಹಂಚೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ಈ ಕಾಡಾನೆ ನುಗ್ಗಿ ಬಂದಿತ್ತು. ಕಾಡಾನೆಯನ್ನು ಕಂಡು ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಕಾಡಿನೊಳಗೆ ಹಿಮ್ಮೆಟ್ಟಿಸಿದ್ದಾರೆ. ಈ ಮೂಲಕ ಗ್ರಾಮಸ್ಥರ ಆತಂಕವನ್ನು ದೂರು ಮಾಡಿದ್ದಾರೆ. </p><p>ಆದರೆ, ಗ್ರಾಮದ ಸುತ್ತಮುತ್ತ ಆಗಾಗ್ಗೆ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡುಪ್ರಾಣಿಗಳು ಕಾಡಿನಿಂದ ಬರದಂತೆ ತಡೆಯಬೇಕೆಂದು ಅರಣ್ಯ ಇಲಾಖೆಗೆ ಹಂಚೀಪುರ ಗ್ರಾಮಸ್ಥರು ಒತ್ತಾಯಿಸಿದರು. </p><p>ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಹೆಡಿಯಾಲ ಎಸಿಎಫ್ ಡಿ.ಪರಮೇಶ್, "ಕಾಡಾನೆ ನಿಯಂತ್ರಣ ತಪ್ಪಿ ಹಾಡಿಗೆ ಬಂದಿದೆ. ಗ್ರಾಮಸ್ಥರು ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಸಿಬ್ಬಂದಿ ಭೇಟಿ ನೀಡಿದ್ದಲ್ಲದೇ ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ" ಎಂದು ಮಾಹಿತಿ ನೀಡಿದರು.</p><p>ಇದನ್ನೂ ಓದಿ: ಶಾಲಾ ವಾಹನ ಅಟ್ಟಿಸಿಕೊಂಡು ಬಂದ ಒಂಟಿ ಸಲಗ: ವಿಡಿಯೋ - WILD ELEPHANT CHASED SCHOOL BUS</a></p>
