<p>ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಕಣಿವೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆಯ ಚಲನವಲನಗಳು ಸೆರೆಯಾಗಿವೆ. </p><p>ತಾಲೂಕಿನ ನೂಲ್ವಿ, ಶೆರೇವಾಡ, ಅದರಗುಂಚಿ ಗ್ರಾಮಗಳ ಸುತ್ತಮುತ್ತ ಚಿರತೆ ಸಂಚರಿಸಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೂಲ್ವಿ ಸೇರಿದಂತೆ ಇತರೆ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.</p><p>ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಬೋನಿಗೆ ಬಿದ್ದಿತ್ತು ಚಿರತೆ: ತಿಂಗಳಿಗೂ ಅಧಿಕ ಕಾಲ ಜನರ ನಿದ್ದೆಗೆಡಿಸಿದ್ದ ಚಿರತೆ ಕೆಲ ದಿನಗಳ ಹಿಂದೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿತ್ತು. ಇದರಿಂದ ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಈ ಭಾಗದ ಜನರು ನಿರಾಳರಾಗಿದ್ದರು. </p><p>ಡಿ.17ರಿಂದ ನಗರದ ವಿಮಾನ ನಿಲ್ದಾಣ, ಕಾರವಾರ ರಸ್ತೆ, ಸುತಗಟ್ಟಿ, ಗಾಮನಗಟ್ಟಿ, ಸತ್ತೂರು ಸೇರಿದಂತೆ ಅನೇಕ ಕಡೆಗಳಲ್ಲಿ 4-5 ಬಾರಿ ಈ ಚಿರತೆ ಕಾಣಿಸಿಕೊಂಡು, ಜನರ ಆತಂಕಕ್ಕೆ ಕಾರಣವಾಗಿತ್ತು. ಮೈಸೂರು, ಗದಗ, ಬೆಳಗಾವಿಯಿಂದ ಆಗಮಿಸಿದ್ದ ಅರಣ್ಯ ಇಲಾಖೆ ತಂಡ ವಿಶೇಷ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಸೆರೆಯಾಗಿರಲಿಲ್ಲ.</p><p>ಚಿರತೆಯನ್ನು ಬೋನಿಗೆ ಬೀಳಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ 3 ಸಾಮಾನ್ಯ ಹಾಗೂ 1 ತುಮಕೂರು ಮಾದರಿ ವಿಶೇಷ ಬೋನಿಡಲಾಗಿತ್ತು. ಅದರಂತೆ, ಸತ್ತೂರಿನಲ್ಲಿ ಒಂದು ಬೋನ್ ಇಡಲಾಗಿತ್ತು. ಚಿರತೆಯ ಚಲನವಲನಗಳನ್ನು ತಿಳಿಯಲು ವಿವಿಧೆಡೆಗಳಲ್ಲಿ ಒಟ್ಟು 25ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. </p><p>ಇವುಗಳನ್ನೂ ಓದಿ:</p><ul><li>ತುಮಕೂರು: ಒಂದೇ ದಿನ ಬೋನಿಗೆ ಬಿದ್ದ ಎರಡು ಚಿರತೆಗಳು</a></li><li>ಚಿರತೆ ದಾಳಿ ಪ್ರಕರಣ: ಪಾದಯಾತ್ರೆ ವೇಳೆ ಡ್ರೋಣ್ ಕಣ್ಗಾವಲಿಗೆ ಸಚಿವ ಖಂಡ್ರೆ ಸೂಚನೆ</a></li></ul>
