<p>ವಿಜಯನಗರ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕೊಟ್ಟೂರು ಶ್ರೀ ಗುರು ಕೊಟ್ಟೂರು ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ಭಕ್ತಿ ಭಾವದಿಂದ ಇಂದು ನೆರವೇರಿತು. ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಕಾರ್ಯಕ್ರಮಗಳು ನಡೆದವು. ಸಹಸ್ರ ಭಕ್ತರ ದಂಡು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಹರಿದುಬಂದು ದೇವರ ದರ್ಶನ ಪಡೆದು ಹರಕೆ ತೀರಿಸಿಕೊಂಡರು. ಜಾತ್ರೆಯ ಮುಖ್ಯ ಆಕರ್ಷಣೆಯಾಗಿದ್ದ ಮಹಾ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಕರೆತರಲಾಯಿತು. ಭಕ್ತರು ಜಯ ಘೋಷಣೆಗಳೊಂದಿಗೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಸಹಸ್ರಾರು ಭಕ್ತರ ಆಗಮನದಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಜಾತ್ರೆ ಶಾಂತಿಯುತವಾಗಿ ನೆರವೇರಿತು.</p><p>ಮೂಲಾ ನಕ್ಷತ್ರದ ವೇಳೆ ರಥೋತ್ಸವ: 6 ಗಂಟೆ ನಾಲ್ಕು ನಿಮಿಷಕ್ಕೆ ಮೂಲಾ ನಕ್ಷತ್ರದ ವೇಳೆ ಕೊಟ್ಟೂರು ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ರಥೋತ್ಸವಕ್ಕೆ ಭಕ್ತಿ ಭಾವದಲ್ಲಿದ್ದ ಭಕ್ತರು ಸಾಕ್ಷಿಯಾದರು. </p><p>ಭಾನುವಾರದಿಂದಲೇ ಜಾತ್ರಾ ಕಾರ್ಯಕ್ರಮಗಳು ಆರಂಭವಾಗಿದ್ದವು. ಫೆ.8 ರಂದು ಬೆಳ್ಳಿ ರಥದಲ್ಲಿ ನಾಗರವಾಹನೋತ್ಸವ, 9ರಂದು ನವಿಲು ವಾಹನೋತ್ಸವ, 10 ರಂದು ಗಜ ವಾಹನೋತ್ಸವ, 11 ರಂದು ವೃಷಭ ವಾಹನೋತ್ಸವ ಹಾಗೂ 12 ರಂದು ಗುರುವಾರ ಮಹಾ ರಥೋತ್ಸವ ನೆರವೇರಿತು. 15 ರಂದು ಮಹಾಶಿವರಾತ್ರಿ, 17 ರಂದು ಮಂಗಳವಾರ ಅಮಾವಾಸ್ಯೆ ಪೂಜಾ ಸಮಾರಂಭದೊಂದಿಗೆ ರಥೋತ್ಸವ ಸಂಪನಗೊಳ್ಳಲಿದೆ. </p>
