<p>ಮೈಸೂರು: ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಐವರು ದರೋಡೆಕೋರರು ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಹಣ ಕಿತ್ತುಕೊಂಡು ಪರಾರಿಯಾದ ಘಟನೆ ಮೈಸೂರು-ಹುಣಸೂರು ರಸ್ತೆಯ ಕರಿಮುದ್ದನಹಳ್ಳಿ ಬಳಿ ಗುರುವಾರ ರಾತ್ರಿ ನಡೆದಿದೆ. ಕೃತ್ಯ ಪೆಟ್ರೋಲ್ ಬಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.</p><p>ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಮುದ್ದನಹಳ್ಳಿ ಗ್ರಾಮದ ಬಳಿಯಿರುವ ಸ್ವಾಮಿ ಸರ್ವಿಸ್ ಸ್ಟೇಷನ್ನ ಪೆಟ್ರೋಲ್ ಬಂಕ್ಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಐವರು ಯುವಕರ ಗುಂಪು ಗುರುವಾರ(ಫೆ.12) ರಾತ್ರಿ 10:33ರ ವೇಳೆ ಪೆಟ್ರೋಲ್ ಬೇಕು ಎಂದು ಬಂದು ಕೇಳಿದ್ರು. ಬಳಿಕ ಬಂಕಿನ ಆಫೀಸ್ನ ಒಳಗೆ ನುಗ್ಗಿ ಡ್ರಾಗರ್ ಹಾಗೂ ಮಚ್ಚು ತೋರಿಸಿ ಹಣ ಎಲ್ಲಿದೆ ತೋರಿಸು ಎಂದು ಸಿಬ್ಬಂದಿಗೆ ಬೆದರಿಸಿದ್ದಾರೆ. ನಂತರ ಒಬ್ಬ ಸಿಬ್ಬಂದಿಯ ಬಳಿ ಇದ್ದ 15,300 ರೂ. ಹಣ ಕಿತ್ತುಕೊಂಡು, ಮತ್ತೆ ಬೇರೆ ಹಣ ತೋರಿಸು ಎಂದಾಗ ಸಿಬ್ಬಂದಿ ಅವರಿಂದ ತಪ್ಪಿಸಿಕೊಂಡು ಹೊರಗಡೆ ಒಡಿಹೋಗಿ ಅಕ್ಕ-ಪಕ್ಕದ ಜನರನ್ನು ಕೂಗಿ ಕರೆದಾಗ ದರೋಡೆಕೋರರು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ.</p><p>ದರೋಡೆಕೋರರು ತಂದಿದ್ದ ಡ್ರಾಗರ್ ಹಾಗೂ ಮಚ್ಚುಗಳನ್ನು ಬಂಕಿನ ಕಚೇರಿಯಲ್ಲೇ ಬಿಟ್ಟು ಹೋಗಿದ್ದು, ಈ ಸಂಬಂಧ ಬಂಕ್ ಸಿಬ್ಬಂದಿ ಸಮೀಪದ ಬಿಳಿಕೆರೆ ಪೊಲೀಸ್ ಠಾಣೆಗೆ ಸಿಸಿಟಿವಿ ದೃಶ್ಯಗಳ ಸಮೇತ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p><p>ಇವುಗಳನ್ನೂ ಓದಿ:</p><ul><li>ಚಿನ್ನದಂಗಡಿಗೆ ನುಗ್ಗಿ ನಗ-ನಾಣ್ಯ ದೋಚಿದ್ರು, ಮೊಬೈಲ್ ಬಿಟ್ಟು ಹೋಗಿದ್ರು! ಏಳೇ ದಿನದಲ್ಲಿ ಐವರು ಲಾಕ್</a></li><li>ಬೆಂಗಳೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಬೈಕ್ ಅಡ್ಡಗಟ್ಟಿ ದರೋಡೆ</a></li></ul>
