<p>ಚಾಮರಾಜನಗರ: ಹಲವು ದಿನಗಳಿಂದ ಓಡಾಡುತ್ತಾ, ಸಾಕುನಾಯಿ ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡಿ ರೈತರಲ್ಲಿ ಆತಂಕ ಮೂಡಿಸಿದ್ದ ಹೆಣ್ಣು ಚಿರತೆಯನ್ನು ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.</p><p>ಪಡಗೂರು ಗ್ರಾಮದ ರಾಘವನ್ ಎಂಬುವರ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸೆರೆ ಸಿಕ್ಕ ಚಿರತೆ 3-4 ವರ್ಷ ವಯಸ್ಸಿನದ್ದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಕಳೆದ ವಾರವೂ ರಾಘವನ್ ಅವರ ಸಾಕುನಾಯಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಚಿರತೆ ಸೆರೆಗೆ ಬೋನ್ ಇಡುವಂತೆ ಸ್ಥಳೀಯ ರೈತ ಮುಖಂಡರು ಒತ್ತಾಯಿಸಿದ್ದ ಹಿನ್ನೆಲೆ ಒಂದು ವಾರದಿಂದ ಬೋನ್ ಇಡಲಾಗಿತ್ತು. ಕೊನೆಗೂ ಆಹಾರದಾಸೆಗೆ ಬಂದು ಚಿರತೆ ಸೆರೆಯಾಗಿದೆ.</p><p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯಕ್ಕೆ ಪಡಗೂರು ಗ್ರಾಮ ಒಳಪಡಲಿದ್ದು, ಸೆರೆ ಸಿಕ್ಕ ಚಿರತೆಯನ್ನು ದಟ್ಟಾರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.</p><p>ಮನೆಗೆ ನುಗ್ಗಿದ ಜಿಂಕೆ ರಕ್ಷಣೆ: ಆಹಾರದಾಸೆಗೆ ನಾಡಿನತ್ತ ಬಂದು ಬಳಿಕ ನಾಯಿ ಇಲ್ಲವೇ ವನ್ಯಜೀವಿ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಗೆ ನುಗ್ಗಿದ ಜಿಂಕೆಯನ್ನು ರಕ್ಷಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ನಡೆದಿದೆ. ಕುರುಬರಹುಂಡಿ ಗ್ರಾಮದ ಶರಣಪ್ಪ ಎಂಬವರ ಮನೆಗೆ ನುಗ್ಗಿದ ಜಿಂಕೆಯು ಕೊನೆಗೂ ಬಚಾವಾಗಿದೆ. ಜಿಂಕೆ ಕಂಡು ಗಾಬರಿಗೊಳಗಾದ ಮನೆಮಂದಿ ಬಳಿಕ ಅದನ್ನು ಆರೈಕೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಭೇಟಿ ನೀಡಿ ಜಿಂಕೆಯನ್ನು ರಕ್ಷಿಸಿ ಕರೆದೊಯ್ದು, ಜಿಂಕೆಯನ್ನು ಮತ್ತೆ ಸುರಕ್ಷಿತವಾಗಿ ಕಾಡಿಗೆ ಬಿಡಲಿದ್ದಾರೆ.</p><p>ಇದನ್ನೂ ಓದಿ: ಬಾಲಕನ ಮೇಲೆ ಚಿರತೆ ದಾಳಿ ಯತ್ನ; ಮಾದಪ್ಪನ ಭಕ್ತರಲ್ಲಿ ಮತ್ತೆ ಚಿರತೆ ದಾಳಿ ಆತಂಕ</a></p>
