<p>ವಿಜಯನಗರ: ತುಂಗಭದ್ರೆಯ ತಟದಲ್ಲಿರುವ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಪ್ರಸಿದ್ಧ ಕುರುವತ್ತಿ ಸುಕ್ಷೇತ್ರದಲ್ಲಿ ಬಸವೇಶ್ವರ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವರ ರಥೋತ್ಸವ ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಿತು.</p><p>ಬೃಹತ್ ರುದ್ರಾಕ್ಷಿ ಮಾಲೆ, ತಳಿರು ತೋರಣಗಳಿಂದ ಅಲಂಕರಿಸಿದ್ದ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ ಅಪಾರ ಸಂಖ್ಯೆ ಭಕ್ತರ ''ಹರ ಹರ ಮಹಾದೇವ…'' ಜಯಘೋಷದೊಂದಿಗೆ ರಥೋತ್ಸವ ಚಾಲನೆ ಪಡೆದುಕೊಂಡಿತು. </p><p>ರಥ ಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ಕೈ ಮುಗಿದರು. ರಥವು ಪಾದಗಟ್ಟೆವರೆಗೂ ಸಾಗಿ ಮೂಲ ಸ್ಥಳಕ್ಕೆ ಹಿಂತಿರುಗಿತು. ಸಮಾಳ, ಮಂಗಳ ವಾದ್ಯಗಳು ವಿಜೃಂಭಣೆಯ ರಥೋತ್ಸವಕ್ಕೆ ಮೆರಗು ತಂದವು. ನಾಡಿನ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. </p><p>ಮಹಾಶಿವರಾತ್ರಿ ಅಮವಾಸ್ಯೆ ಪ್ರಯುಕ್ತ ಬೆಳಗ್ಗೆಯಿಂದಲೇ ಸುಕ್ಷೇತ್ರದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಇಡೀ ದಿನ ಭಕ್ತರು ಸರದಿ ಸಾಲಿನಲ್ಲಿ ತೆರಳಿ ಭಕ್ತಿಭಾವದಿಂದ ದೇವರ ದರ್ಶನ ಪಡೆದರು. ಸುಕ್ಷೇತ್ರದೆಲ್ಲೆಡೆ ''ಬಸವಣ್ಣ ದೊರೆಯೇ ನಿನಗಾರು ಸರಿಯೇ... ಸರಿ ಸರಿ ಎಂದವರ ಸೊಕ್ಕು ಮುರಿಯೇ...'' ಎಂಬ ದೇವರಿಗೆ ಬಹುಪರಾಕ್ ಹೇಳಿದ್ದು ಮುಗಿಲು ಮುಟ್ಟಿತು. </p><p>ಹೂವಿನಹಡಗಲಿ ತಾಲೂಕು ಸೇರಿದಂತೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. </p><p>ಇದನ್ನೂ ಓದಿ: ಕೊಟ್ಟೂರೇಶ್ವರ ಮಹಾ ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ - KOTTURESHWAR JATRE</a></p>
