<p>ಬೆಂಗಳೂರು: ಹಾರ್ಡ್ವೇರ್ ಗೋದಾಮು ಅಗ್ನಿಗಾಹುತಿಯಾದ ಘಟನೆ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರ ಪೇಟೆಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಹಾರ್ಡ್ವೇರ್ ಮತ್ತಿತರ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಕ್ಕಪಕ್ಕದ ಕೆಲ ಅಂಗಡಿಗಳಿಗೂ ಹಾನಿಯಾಗಿದೆ.</p><p>ಭಾರೀ ಪ್ರಮಾಣದಲ್ಲಿ ಹೊಗೆ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸುಮಾರು ಎರಡು ಗಂಟೆ ಶ್ರಮಿಸಿ ಬೆಂಕಿ ನಿಯಂತ್ರಿಸಿದ್ದಾರೆ. </p><p>"ಒಂದು ಅಂಗಡಿಯಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ನಂತರ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿತು. ತಕ್ಷಣ ಕಟ್ಟಡದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು. ಅಂಗಡಿಗಳಲ್ಲಿದ್ದ ಹಾರ್ಡ್ವೇರ್ ವಸ್ತುಗಳು, ಡೆಕೋರೇಷನ್ ಸಾಮಗ್ರಿ, ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಹೋಗಿವೆ. ಕಟ್ಟಡದಲ್ಲಿ ಯಾರೂ ಇರಲಿಲ್ಲ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಅನಾಹುತ ಆಗಿರಬಹುದು" ಎಂದು ಕಟ್ಟಡದ ಮಾಲೀಕ ವಿನೋದ್ ತಿಳಿಸಿದರು.</p><p>"ದಟ್ಟ ಬೆಂಕಿ, ಹೊಗೆ ಆವರಿಸಿದ್ದರಿಂದ 12 ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ಆರಿಸಲಾಗಿದೆ. ಗೋದಾಮಿನ ಹಲವೆಡೆ ಕಿಟಕಿಗಳಿಲ್ಲ. ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚಾಗಿರುವ ಕಾರಣದಿಂದ ಹೊಗೆ ಆವರಿಸಿಕೊಂಡು ಕಾರ್ಯಾಚರಣೆಗೆ ಸ್ವಲ್ಪ ಅಡಚಣೆಯಾಯಿತು. ನೀರಿನ ಅವಶ್ಯಕತೆಯಿತ್ತು. ಸ್ಥಳೀಯರು, ಪೊಲೀಸರು ನಮಗೆ ಸಹಕಾರ ನೀಡಿದರು. ಕಾರ್ಯಾಚರಣೆಯ ಸಂದರ್ಭದಲ್ಲಿ ನಮ್ಮ ಓರ್ವ ಸಿಬ್ಬಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ" ಎಂದು ಅಗ್ನಿಶಾಮಕದಳದ ಅಧಿಕಾರಿ ಜಯರಾಮಯ್ಯ ಮಾಹಿತಿ ನೀಡಿದರು.</p><p>ಇವುಗಳನ್ನೂ ಓದಿ:</p><ul><li>ದಾವಣಗೆರೆ: ಅಗ್ನಿ ಅವಘಡದಿಂದ ಗ್ಯಾರೇಜ್ನಲ್ಲಿದ್ದ 4 ಕಾರುಗಳು ಬೆಂಕಿಗಾಹುತಿ</a></li><li>ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ: ಅಂಗಡಿ ಸುಟ್ಟು ಭಸ್ಮ</a></li></ul>
