<p>ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಅದರಲ್ಲೂ ಒಂದೇ ದಂತ ಹೊಂದಿರುವ ಕಾಡಾನೆ ಭೀಮ ತನ್ನ ಸಹಚರರೊಂದಿಗೆ ಒಂದಾದ ಮೇಲೊಂದು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಕಾಫಿ ಹಾಗೂ ಅಡಿಕೆ ಬೆಳೆಗಾರರು ಕಣ್ಣೀರು ಹಾಕುತ್ತಾ ಕೂರುವಂತಾಗಿದೆ.</p><p>ನಾನು ಮುಂದೆ ಹೋಗ್ತೀನಿ, ಎಲ್ಲರೂ ಸೈಲೆಂಟಾಗಿ ಹಿಂದೆ ಬನ್ನಿ ಎನ್ನುವ ರೀತಿಯಲ್ಲಿ ಭೀಮ ಮುಂದೆ ಸಾಗಿದರೆ, ಆತನನ್ನು ಸುಮಾರು 30 ಕಾಡಾನೆಗಳು ಹಿಂಬಾಲಿಸಿಕೊಂಡು ರಸ್ತೆ ದಾಟಿ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ. ಮೂಡಿಗೆರೆ-ಬೇಲೂರು ಮಾರ್ಗ ಮಧ್ಯೆಯ ಕಸ್ಕೆಬೈಲ್ ಗ್ರಾಮದ ಬಳಿ ಘಟನೆ ನಡೆದಿದೆ.</p><p>ಆನೆಗಳ ಕಾಲಡಿಯಲ್ಲಿ ಮರಿಗಳ ಓಡಾಡುತ್ತಿದ್ದು, ಮಲೆನಾಡಿಗರು ಕೂಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ತೋಟಕ್ಕೆ ಕಾರ್ಮಿಕರು ಬಾರದೇ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಡಾನೆಗಳ ಹಿಂಡಿನಲ್ಲಿ 8-10 ಮರಿಗಳು ಇರುವುದರಿಂದ ಅವುಗಳನ್ನು ಕಾಡಿಗೆ ಓಡಿಸುವುದು ಅರಣ್ಯ ಇಲಾಖೆಗೂ ಸವಾಲಾಗಿದೆ.</p><p>ಆನೆಗಳ ಹಿಂಡು ಯಾವ ಭಾಗದಲ್ಲಿದೆ ಎಂದು ಅರಣ್ಯ ಇಲಾಖೆಯ ಒಂದು ತಂಡ ಎಚ್ಚರವಹಿಸಿ, ಹಳ್ಳಿಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದರಿಂದ ಮಲೆನಾಡು ಭಾಗದ ಜನರು ಮನೆಯಿಂದ ಹೊರಬರುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. </p><p>ಇದನ್ನೂ ಓದಿ: ಮಂಗೋಲಿಯದಿಂದ ವಲಸೆ ಬಂದು ಮೈಸೂರಲ್ಲಿ ಉರುಳಿಗೆ ಬಿದ್ದ ಹೆಬ್ಬಾತು ಪಕ್ಷಿ</a></p>
