<p>ಬಳ್ಳಾರಿ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ರಂಜಾನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರದಲ್ಲಿನ ಪ್ರಮುಖ ಮಾರುಕಟ್ಟೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಖರೀದಿಗಾಗಿ ಜನಸಂದಣಿ ಹೆಚ್ಚಾಗಿದೆ.</p><p>ಕಳೆದ ಕೆಲವು ದಿನಗಳಿಂದಲೇ ವ್ಯಾಪಾರ ಚಟುವಟಿಕೆಗಳು ಗರಿಗೆದರಿದ್ದು, ಹೊಸ ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಸುಗಂಧ ದ್ರವ್ಯಗಳು, ಮೆಹೆಂದಿ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಜೋರಾಗಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಜನರ ದಟ್ಟಣೆ ಹೆಚ್ಚಿದ್ದು, ಕಾಲಿಡಲು ಕೂಡ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p><p>ಉಪವಾಸದಲ್ಲಿರುವ ಮುಸ್ಲಿಂ ಬಾಂಧವರು ಸಂಜೆಯ ವೇಳೆಗೆ ಉಪವಾಸ ಮುರಿದು ಕುಟುಂಬ ಸಮೇತ ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಿದ್ದಾರೆ. ಖರ್ಜೂರ, ಹಣ್ಣುಗಳು, ಸಿಹಿ ತಿನಿಸುಗಳು, ಜ್ಯೂಸ್, ಡ್ರೈಫ್ರೂಟ್ಸ್ ಹಾಗೂ ಚಿಕನ್ ಮತ್ತು ಮಟನ್ ಖಾದ್ಯಗಳನ್ನು ಸವಿಯುತ್ತಿದ್ದಾರೆ.</p><p>ಇದರ ಜೊತೆಗೆ, ನಗರದಲ್ಲಿ ಹಲೀಮ್ಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಉಪವಾಸ ಮುರಿಯುವ ವೇಳೆ ಹೋಟೆಲ್ಗಳ ಮುಂದೆ ಹಲೀಮ್ ಸವಿಯಲು ಜನರು ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ. ಗೋಧಿ, ಮಾಂಸ ಮತ್ತು ಮಸಾಲೆಗಳ ಸಂಯೋಜನೆಯಿಂದ ತಯಾರಾಗುವ ಈ ಖಾದ್ಯವು ರುಚಿ ಹಾಗೂ ಪೌಷ್ಟಿಕಾಂಶದಿಂದ ಜನರನ್ನು ಆಕರ್ಷಿಸುತ್ತಿದೆ.</p><p>ಈ ಕುರಿತು ಹೋಟೆಲ್ ಮಾಲೀಕ ಮೊಹಮ್ಮದ್ ಮುನಾವರ್ ಹುಸೇನ್ ಮಾತನಾಡಿ, "ನಮ್ಮಲ್ಲಿ ಚಿಕನ್ ಸತ್ಯಾ, ಅಂಗಾರಿ, ಕನ್ಯಾಕುಮಾರಿ, ಕೊಲ್ಹಾಪುರಿ, ತಂದೂರಿ ಸೇರಿದಂತೆ ವಿವಿಧ ಬಗೆಯ ಚಿಕನ್ ಖಾದ್ಯಗಳನ್ನು ಸಿದ್ಧಪಡಿಸುತ್ತೇವೆ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ವಿಶೇಷವಾಗಿ ತಯಾರಿಸುತ್ತೇವೆ. ರಂಜಾನ್ ತಿಂಗಳಲ್ಲಿ ಉಪವಾಸದ ಜೊತೆಗೆ 'ಜಕಾತ್' ಎಂಬ ದಾನಧರ್ಮಕ್ಕೂ ವಿಶೇಷ ಮಹತ್ವವಿದೆ. ತಮ್ಮ ಆದಾಯದ ಒಂದು ಭಾಗವನ್ನು ಬಡವರಿಗೆ ನೀಡುವುದು ಈ ಹಬ್ಬದ ವಿಶೇಷತೆ. ಎಲ್ಲರೂ ಶಾಂತಿ ಮತ್ತು ಸಮೃದ್ಧಿಯಿಂದ ಬದುಕಲಿ ಎಂಬುದು ನಮ್ಮ ಆಶಯ ಇದರದು" ಎಂದರು. </p><p>ಒಟ್ಟಾರೆ, ರಂಜಾನ್ ಹಬ್ಬದ ಸಂಭ್ರಮ ಬಳ್ಳಾರಿಯಲ್ಲಿ ಮುಂದುವರಿದಿದ್ದು, ಹಬ್ಬದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ.</p><p>ಇದನ್ನೂ ಓದಿ: ರಂಜಾನ್ನಲ್ಲಿ ಬೇಡಿಕೆ ಪಡೆಯುವ ಹಲೀಮ್: ತಲೆತಲಾಂತರದಿಂದ ರುಚಿ ಕಾಪಾಡಿಕೊಂಡು ಬಂದಿರುವ ಉಸ್ತಾದ್ಗಳು</a></p>
