<p>ಚಿಕ್ಕಮಗಳೂರು: ತಾಲೂಕಿನಲ್ಲಿ ಕಳೆದ 15 ದಿನಗಳಿಂದ 40ಕ್ಕೂ ಹೆಚ್ಚು ಕಾಡಾನೆಗಳ ಒಂದೊಂದು ಗುಂಪು, ಒಂದೊಂದು ಕಡೆ ಮೊಕ್ಕಾಂ ಹೂಡಿವೆ. ಒಂದು ಕಡೆ ರೈತರ ನಿದ್ದೆಗೆಡಿಸಿದ್ದು, ಮತ್ತೊಂದು ಕಡೆ ಅರಣ್ಯ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.</p><p>ಸಾರಗೋಡು ಅರಣ್ಯ ಪ್ರದೇಶದಲ್ಲಿ, ಗೋಣಿಬೀಡು ಭಾಗದಲ್ಲಿ, ಜಿ.ಹೊಸಳ್ಳಿ ಹಾಗೂ ಕಸ್ಕೆಬೈಲು ಗ್ರಾಮಗಳಲ್ಲಿ ಆನೆಗಳ ಗುಂಪು ಮನಸೋ ಇಚ್ಛೆ ಸುತ್ತಾಡುತ್ತಿದ್ದು, ಕಾಫಿ ಗಿಡ ಹಾಗೂ ಅಡಿಕೆ ಬೆಳೆಗಳನ್ನು ಸಂಪೂರ್ಣ ಧ್ವಂಸ ಮಾಡುತ್ತಿವೆ. ಕಾಡಾನೆಗಳ ಹಿಂಡಿನ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ಎಚ್ಚರಿಕೆಯ ಕಣ್ಣಿಟ್ಟಿದ್ದಾರೆ.</p><p>ಭುವನೇಶ್ವರಿ ಟೀಂ ಹಿಂಡಿನಲ್ಲಿ ಆನೆಗಳು ತಮ್ಮ ಮರಿಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸುತ್ತಾ ಸಾಗುತ್ತಿರುವ ಅಪರೂಪದ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿವೆ. ತಾಯಿ ಆನೆಯು ತನ್ನ ಮರಿಗಳಿಗೆ ಸೂಚನೆ ನೀಡುತ್ತ, ಸುರಕ್ಷಿತವಾಗಿ ತನ್ನ ಹಿಂದೆಯೇ ಬರುವಂತೆ ಹಾಗೂ ಎಲ್ಲಿಯೂ ಗುಂಪು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ ಕರೆದೊಯ್ಯುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ.</p><p>ಈ ಹಿಂಡಿನಲ್ಲಿ ಆರು ಆನೆಗಳಿದ್ದು, ಮೂರು ಪುಟಾಣಿ ಮರಿ ಆನೆಗಳು ತಾಯಿ ಆನೆಗಳ ಜೊತೆ ಒಂದರ ಹಿಂದೆ ಒಂದು ಹೆಜ್ಜೆ ಹಾಕುತ್ತಾ ಹಿಂದೇ ಮುಂದೆ ಸಾಗುತ್ತಿರುವ ದೃಶ್ಯ ನಿಜಕ್ಕೂ ಮನಮೋಹಕವಾಗಿದೆ.</p><p>ನಿತ್ಯ ಆನೆ ಹಾವಳಿಯಿಂದ ಕಂಗೆಟ್ಟಿರುವ ಈ ಭಾಗದ ಗ್ರಾಮಸ್ಥರು, ಭಯದಿಂದಾಗಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿರುವ ಕೂಲಿ ಕಾರ್ಮಿಕರು ಈ ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.</p><p>ಇದನ್ನೂ ನೋಡಿ: ಮೈಸೂರು: ಮೇವಿಗಾಗಿ ಬಂದು ರೈಲ್ವೆ ಬ್ಯಾರಿಕೇಡ್ಗೆ ಸಿಲುಕಿ ಒದ್ದಾಡಿದ ಸಲಗ</a></p>
