<p>ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆಯ ಸಫಾರಿ ಕೇಂದ್ರದಿಂದ ಹೊರಟ ಸಫಾರಿಗರು, ಮರಿಯನ್ನು ರಕ್ಷಣೆ ಮಾಡುತ್ತಾ ಸಾಗುತ್ತಿದ್ದ ಕಾಡಾನೆಗಳ ಹಿಂಡನ್ನು ಕಣ್ತುಂಬಿಕೊಂಡರು.</p><p>ಕಾಕನಕೋಟೆ ಅರಣ್ಯದಲ್ಲಿ ಆನೆಗಳ ಹಿಂಡಿನ ಸಂಚಾರದ ಅಪರೂಪದ ದೃಶ್ಯ ಪ್ರವಾಸಿಗರಿಗೆ ಮುದ ನೀಡಿತು. ವನ್ಯಪ್ರಾಣಿಗಳ ಸಂಚಾರಕ್ಕೆ ಅಡಚಣೆ ಆಗದಂತೆ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ, ನಿಶ್ಯಬ್ದವಾಗಿ ನಿಂತರು. ತಾಯಿ ಆನೆ ತನ್ನ ಮರಿಯನ್ನು ಜೋಪಾನವಾಗಿ ಕರೆದೊಯ್ಯುತ್ತಿದ್ದರೆ, ಅದರ ಸಹೋದರ, ಸಹೋದರಿಯರು ಮರಿಯನ್ನು ಸುತ್ತುವರಿದಿದ್ದ ದೃಶ್ಯವನ್ನು ಸಫಾರಿಗರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು.</p><p>ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸಫಾರಿ ಲೈನ್ ದಾಟಿ ಹೆದ್ದಾರಿಯ ಮೂಲಕ ಕಬಿನಿ ಹಿನ್ನೀರಿನತ್ತ ಸಾಗುತ್ತಿದ್ದ ಆನೆಗಳ ಹಿಂಡನ್ನು ಕಂಡ ವಾಹನ ಸವಾರರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಸಂತಸದಿಂದ ನೋಡಿದರು. ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್, ಸೋಮವಾರ ಸಂಜೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.</p><p>ಡಿಆರ್ಎಫ್ಒ ನವೀನ್ ಅವರು ಮಾತನಾಡಿ, ಬೇಸಿಗೆ ಆರಂಭವಾದಾಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಕಬಿನಿ ಹಿನ್ನೀರಿನ ಕಡೆ ಬೆಳಗ್ಗೆ ಹಾಗೂ ಸಂಜೆ ವೇಳೆ ಆನೆಗಳ ಸಂಚಾರ ಸಾಮಾನ್ಯ. ಆದರೆ, ಇಲ್ಲಿ ಆನೆಗಳು ಚಿಕ್ಕ ಮರಿಯನ್ನು ರಕ್ಷಿಸುತ್ತಾ ಗುಂಪಿನಲ್ಲಿ ಕರೆದೊಯ್ಯುತ್ತಿವೆ. ವನ್ಯಪ್ರಾಣಿಗಳು ರಸ್ತೆ ದಾಟುವಾಗಿ ವಾಹನ ಸವಾರರು ಸಂಯಮದಿಂದ ವಾಹನ ನಿಲ್ಲಿಸಿ ದಾಟಲು ಅವಕಾಶ ಮಾಡಿಕೊಟ್ಟು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.</p><p>ಇವುಗಳನ್ನೂ ಓದಿ:</p><ul><li>ಚಿಕ್ಕಮಗಳೂರು: ಮನೆಯಂಗಳಕ್ಕೆ ನುಗ್ಗಿದ ಕಾಡಾನೆಗಳು; ಕಾಂಪೌಂಡ್, ನರ್ಸರಿಗೆ ಹಾನಿ</a></li><li>ಮೂರು ತಾಯಿ ಆನೆಗಳ ಹಿಂಬಾಲಿಸಿದ 3 ಮರಿಗಳು: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮನಮೋಹಕ ದೃಶ್ಯ</a></li></ul>
