<p>ರಾಯಚೂರು : ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಈಗಾಗಲೇ ಗ್ಯಾಸ್ ಸಿಲಿಂಡರ್ಗೆ ಎಫೆಕ್ಟ್ ಆಗಿದ್ದು, ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಲಿದೆ ಎಂಬ ವದಂತಿಯಿಂದ ರಾಯಚೂರಿನ ಕವಿತಾಳದಲ್ಲಿ ಭಾರಿ ಗೊಂದಲದಿಂದ ಪೆಟ್ರೋಲ್ ಬಂಕ್ಗಳ ಬಳಿ ವಾಹನ ಸವಾರರು ಮುಗಿಬಿದ್ದಿದ್ದಾರೆ.</p><p>ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಕಳೆದ ರಾತ್ರಿ 8 ಗಂಟೆಯಿಂದಲೇ ಎರಡು ಬಂಕ್ಗಳಲ್ಲಿ ಜನರು ಪೆಟ್ರೋಲ್ ಹಾಗೂ ಡೀಸೆಲ್ಗಾಗಿ ಮುಗಿಬಿದ್ದಿದ್ದು, ಕಿಲೋ ಮೀಟರ್ಗಳಷ್ಟು ದೂರ ವಾಹನಗಳು ಸಾಲುಗಟ್ಟಿ ನಿಲುಗಡೆಯಾಗಿದ್ದವು. </p><p>ವದಂತಿಯಿಂದ ಆತಂಕಗೊಂಡ ಜನರು ತಕ್ಷಣ ಇಂಧನ ಸಂಗ್ರಹಿಸಲು ಮುಂದಾಗಿದ್ದರು. ಪರಿಣಾಮವಾಗಿ ಬಂಕ್ಗಳ ಬಳಿ ನಿಯಂತ್ರಣ ತಪ್ಪಿದ ಪರಿಸ್ಥಿತಿ ನಿರ್ಮಾಣವಾಗಿ ಕೆಲವೆಡೆ ವಾಹನ ಸವಾರರ ನಡುವೆ ನೂಕು ನುಗ್ಗಲು ಉಂಟಾಯಿತು. ಹಲವರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಗೂ ಡೀಸೆಲ್ಗಾಗಿ ಕಾಯಬೇಕಾಯಿತು. </p><p>ಸ್ಥಿತಿಗತಿಯನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಭದ್ರತೆ ಒದಗಿಸಿದರು. ಅವರ ಮೇಲ್ವಿಚಾರಣೆಯಲ್ಲಿ ಇಂಧನ ವಿತರಣೆ ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಯಿತು.</p><p>ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸಾಮಾನ್ಯವಾಗಿದ್ದು, ಯಾವುದೇ ಕೊರತೆ ಇಲ್ಲ. ವದಂತಿಯಿಂದ ಜನರು ಅಗತ್ಯಕ್ಕಿಂತ ಹೆಚ್ಚು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಅನಗತ್ಯ ಒತ್ತಡ ಉಂಟಾಗಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.</p><p>ಇದನ್ನೂ ಓದಿ : ವಾಣಿಜ್ಯ ಸಿಲಿಂಡರ್ ಕೊರತೆ: ಮೈಸೂರಿನಲ್ಲಿ 150ಕ್ಕೂ ಹೋಟೆಲ್, ಬೇಕರಿಗಳು ಬಂದ್</a></p>
