<p>ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿ ಕರಡಿಯೊಂದು ರಸ್ತೆಯಲ್ಲಿ ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಗಳವಾರ ಬೆಳಗಿನ ಜಾವ ನಗರದ ಶಂಕರಪುರ, ಎಂ.ಜಿ.ರಸ್ತೆ ಮತ್ತು ಗುರುನಾಥ ಮಾರ್ಗವಾಗಿ ಮಿಲನ್ ಥಿಯೇಟರ್ವರೆಗೆ ಕರಡಿ ರಾಜಾರೋಷವಾಗಿ ಸಂಚರಿಸಿದೆ.</p><p>ಮಂಜು ಮುಸುಕಿದ ಮುಂಜಾನೆ ಕರಡಿ ಕಂಡ ಸ್ಥಳೀಯ ಬೈಕ್ ಸವಾರರೊಬ್ಬರು ಮೊಬೈಲ್ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದ ಸಮೀಪ ಯುವಕ ಕರಡಿಯನ್ನು ಅಟ್ಟಾಡಿಸಿಕೊಂಡು ಹಿಂದೆಯೇ ಓಡಿದ್ದು, ಮಿಲನ್ ಥಿಯೇಟರ್ ಬಳಿ ಕತ್ತಲಿನಲ್ಲಿ ಕಣ್ಮರೆಯಾಗಿದೆ. </p><p>ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಕರಡಿಯನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಸ್ಥಳಾಂತರಿಸುವ ಮೂಲಕ ನಾಗರಿಕರ ಆತಂಕ ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p>ಈ ಕುರಿತು ಪರಿಸರ ತಜ್ಞ ಭರತ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಏಕೆ ಬರುತ್ತಿವೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ. ಚಿಕ್ಕಮಗಳೂರು ನಗರದಲ್ಲೇ ಕರಡಿ ಓಡಾಡಿರುವುದು ಆಶ್ಚರ್ಯ ತಂದಿದೆ. ಈ ಕರಡಿ ದಾರಿ ತಪ್ಪಿ ಬಂದಿರಬಹುದು. ಮೊನ್ನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಕರಡಿ ಸಂಚರಿಸಿತ್ತು. ಕಾಡುಪ್ರಾಣಿಗಳು ನಗರ ಪ್ರವೇಶ ಮಾಡುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆಗಟ್ಟಬೇಕು" ಎಂದು ಒತ್ತಾಯಿಸಿದರು.</p><p>ಇವುಗಳನ್ನೂ ಓದಿ: </p><ul><li>ಮೂಡಿಗೆರೆ ತಾಲೂಕಿಗೆ ಬಂದ 45 ಕಾಡಾನೆಗಳು: ಭೀಮನ ನಾಯಕತ್ವದಲ್ಲಿ ತೋಟ ಗದ್ದೆಗಳಿಗೆ ನುಗ್ಗುತ್ತಿರುವ ಗಜರಾಜ ಪಡೆ</a></li><li>ಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ವಿಡಿಯೋ</a></li></ul>
