<p>ಚಾಮರಾಜನಗರ: ಏಳು ದಿನಗಳ ಅವಧಿಯಲ್ಲಿ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಎರಡನೇ ಬಾರಿ ಬೆಂಕಿ ಬಿದ್ದಿದ್ದು, ಇದರಿಂದಾಗಿ ಒಟ್ಟು 63 ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. </p><p>ಹನೂರು ತಾಲೂಕಿನ ಬಿಆರ್ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಗುಡ್ಡದಲ್ಲಿ ಗುರುವಾರ ಕಾಳ್ಗಿಚ್ಚು ಕಾಣಿಸಿಕೊಂಡು ಸುಮಾರು 25 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ವಾಸು ಅವರ ನೇತೃತ್ವದಲ್ಲಿ 62 ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ತ್ವರಿತವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. </p><p>ಈ ಹಿಂದೆಯೂ ಬೆಂಕಿ ಅನಾಹುತ: ಕಳೆದ ಮಾರ್ಚ್ 26ರಂದು ರಕ್ಷಿತಾರಣ್ಯದ ಬೈಲೂರು ವಲಯ ಮತ್ತು ಕೊಳ್ಳೇಗಾಲ ವನ್ಯಜೀವಿ ವಲಯಕ್ಕೆ ಬೆಂಕಿ ಬಿದ್ದು, 38 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. </p><p>ಏಳು ದಿನದ ಅವಧಿಯಲ್ಲಿ ಎರಡು ಬಾರಿ ಬೆಂಕಿ ಬಿದ್ದಿದ್ದು, ಅರಣ್ಯಾಧಿಕಾರಿಗಳು ಎರಡು ಕೇಸ್ ದಾಖಲಿಸಿಕೊಂಡು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.</p><p>ಈ ಕುರಿತು ಬಿಆರ್ಟಿ ಅರಣ್ಯ ಇಲಾಖೆ ಪ್ರಕಟಣೆ ನೀಡಿದ್ದು, ಪ್ರಸ್ತುತ ಬೇಸಿಗೆ ಕಾಲ ಆಗಿರುವುದರಿಂದ ವಾತಾವರಣವು ಅತಿ ಉಷ್ಣತೆಯಿಂದ ಕೂಡಿರುತ್ತದೆ. ಗಾಳಿಯೂ ವೇಗವಾಗಿ ಬೀಸಿರುವುದರಿಂದ ಬೆಂಕಿಯೂ ತೀವ್ರಗತಿಯಲ್ಲಿ ಹರಡಿದೆ. ಕೊಳ್ಳೇಗಾಲ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಈ ಬಗ್ಗೆ ಎರಡು ಪ್ರಕರಣ ದಾಖಲು ಮಾಡಲಾಗಿದ್ದು, ಕೃತ್ಯದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ತಿಳಿಸಿದೆ. </p><p>ಕಾಡಂಚಿನ ಗ್ರಾಮಗಳಲ್ಲಿ ಹಲವು ಬಾರಿ ಬೆಂಕಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಘಟನೆ ನಡೆದಿರುವುದು ವಿಷಾದನೀಯ ಎಂದು ಅರಣ್ಯ ಇಲಾಖೆ ತಿಳಿಸಿದೆ. </p><p>ಇದನ್ನೂ ಓದಿ: ಚಾಮರಾಜನಗರ: ಬಿಆರ್ ಟಿಯ ಬೈಲೂರು ಅರಣ್ಯ ವಲಯದಲ್ಲಿ ಬೆಂಕಿ; ಧಗ ಧಗಿಸಿದ 35 ಎಕರೆ ಕಾಡು - FOREST FIRE IN BRT BAILURU ZONE</a></p>
