<p>ವಿಜಯನಗರ: ಟಿ.ಬಿ.ಡ್ಯಾಂನ 33 ಕ್ರಸ್ಟ್ಗೇಟ್ಗಳನ್ನು ಬದಲಿಸಿ ಹೊಸ ಕ್ರಸ್ಟ್ಗೇಟ್ಗಳ ಅಳವಡಿಕೆ ಸೇರಿದಂತೆ ಎಲ್ಲ ಕಾಮಗಾರಿಗಳು ಏಪ್ರಿಲ್ ಅಂತ್ಯ ಅಥವಾ ಮೇ 15ರೊಳಗೆ ಪೂರ್ಣಗೊಳ್ಳಲಿದ್ದು, ಡ್ಯಾಂನಲ್ಲಿ ಸಂಪೂರ್ಣ ಪ್ರಮಾಣದ ನೀರು ಸಂಗ್ರಹಿಸಬಹುದು ಎಂದು ಕ್ರಸ್ಟ್ಗೇಟ್ ನಿರ್ಮಾಣ ವಿನ್ಯಾಸ ತಜ್ಞ ಕನ್ನಯ್ಯ ನಾಯ್ಡು ತಿಳಿಸಿದ್ದಾರೆ.</p><p>ಏ.14ರಂದು ಮಧ್ಯಾಹ್ನ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಯ್ಯ ನಾಯ್ಡು, ನಾನು ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ಸದಸ್ಯನಾಗಿದ್ದು, ಸುರಕ್ಷತೆಯ ಬಗ್ಗೆ ಪ್ರಮಾಣಪತ್ರ ನೀಡಿದ್ದೇನೆ. 33 ಗೇಟ್ಗಳ ಪೈಕಿ 26 ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದ್ದು, 15 ಗೇಟ್ಗಳ ಪರೀಕ್ಷೆ ನಡೆಸಲಾಗಿದೆ. ಕೆಲವು ಗೇಟ್ಗಳಿಗೆ ಸ್ಲಿಮ್ ಪ್ಲೇಟ್ ಅಳವಡಿಸಲಾಗುತ್ತಿದೆ. ಮೇ 11ರ ವೇಳೆಗೆ ಚೆನ್ನೈಯಿಂದ ಚೈನ್ಲಿಂಕ್ ಬರಲಿದೆ. 15ರೊಳಗೆ ಚೈನ್ ಅಳವಡಿಕೆ ಹೊರತುಪಡಿಸಿ, ಉಳಿದ ಕೆಲಸಗಳೂ ಪೂರ್ಣಗೊಳ್ಳುತ್ತವೆ ಎಂದರು.</p><p>ಜಲಾಶಯದಲ್ಲಿ ನೀರು ಭರ್ತಿ ಇದ್ದಾಗಲೂ ಚೈನ್ಲಿಂಕ್ ಅಳವಡಿಕೆ ಮಾಡಬಹುದು. ಹೀಗಾಗಿ ಮೇ ಮಧ್ಯಭಾಗದಲ್ಲಿ ಭಾರಿ ಮಳೆ ಸುರಿದರೂ ಈ ಬಾರಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಲಿದೆ. ಕಾಮಗಾರಿಗೆ 51 ಕೋಟಿ ರೂ ವೆಚ್ಚವಾಗಿದೆ. ಗೇಟ್ಗಳಿಗೆ 44 ಕೋಟಿ ರೂ, ಚೈನ್ಲಿಂಕ್ಗೆ 5.1 ಕೋಟಿ ರೂ ಮತ್ತು ಸಲಹೆಗೆ 1.34 ಕೋಟಿ ರೂ ವೆಚ್ಚವಾಗಿದೆ. ಈವರೆಗೆ 29.5 ಕೋಟಿ ರೂ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದರು. </p><p>ವಾರ್ಷಿಕ 11 ಗೇಟ್ಗಳಂತೆ 3 ವರ್ಷಕ್ಕೊಮ್ಮೆ ಎಲ್ಲ ಗೇಟ್ಗಳ ನಿರ್ವಹಣೆ ನಡೆಯುತ್ತದೆ. ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಸುದೀರ್ಘಾವಧಿಗೆ ಬಾಳಿಕೆ ಬರಲಿದೆ. 100 ಟಿಎಂಸಿ ಅಡಿ ನೀರು ಸಂಗ್ರಹ, 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ಅಡಿಯಷ್ಟು ಹೂಳು ಇರಬಹುದು. 102 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ನಾವು ಗರಿಷ್ಠ 100 ಟಿಎಂಸಿ ನೀರು ಸಂಗ್ರಹದ ಲೆಕ್ಕಾಚಾರ ಮಾಡಿದ್ದೇವೆ ಎಂದು ಕನ್ನಯ್ಯ ನಾಯ್ಡು ಹೇಳಿದರು.</p><p>ಇದನ್ನೂ ಓದಿ: ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ</a></p>
