<p>ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಸಿನಿಮಾ ಮರು ಬಿಡುಗಡೆಯಾಗಿದ್ದು, ಅಭಿಮಾನಿಗಳು ಥಿಯೇಟರ್ನಲ್ಲಿ ಕುಣಿದು ಕುಪ್ಪಳಿಸಿದರು.</p><p>ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಮೂವಿ 25 ವರ್ಷಗಳ ನಂತರ ರೀ ರಿಲೀಸ್ ಹಿನ್ನೆಲೆ ಚಾಮರಾಜ ಜೋಡಿ ರಸ್ತೆಯಲ್ಲಿರುವ ಗಾಯತ್ರಿ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಬೃಹತ್ ಕಟೌಟ್ ಹಾಕಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಅನ್ನದಾನ ಮಾಡಿ, 101 ತೆಂಗಿನಕಾಯಿ ಒಡೆದು ಸಂಭ್ರಮಿಸಿದರು. </p><p>25 ವರ್ಷದ ಹಿಂದೆ ಇದ್ದ ಸಡಗರಕ್ಕಿಂತ ದುಪ್ಪಟ್ಟು ಇಂದು ಸಂಭ್ರಮಿಸಿದರು. ವಿಷ್ಣುವರ್ಧನ್ ಅಭಿಮಾನಿ ಎಂ. ಡಿ. ಪಾರ್ಥಸಾರಥಿ ಮಾತನಾಡಿ, ಕೋಟಿಗೊಬ್ಬ ಚಲನಚಿತ್ರ 25 ವರ್ಷಗಳ ನಂತರ ಮರು ಬಿಡುಗಡೆ ಆಗುತ್ತಿರುವುದರಿಂದ ರಾಜ್ಯಾದ್ಯಂತ ಅಭಿಮಾನಿಗಳಿಗೆ ಸಂತೋಷವಾಗಿದೆ. ಶರಣರನ್ನು ಮರಣದಲ್ಲಿ ಕಾಣು ಎನ್ನುವ ಹಾಗೇ, ಇದು ವಿಷ್ಣುವರ್ಧನ್ ಅವರ ಸಮಾಜ ಸೇವೆ ತೋರಿಸಿದೆ ಎಂದರು. ಅಭಿಮಾನಿಗಳು ನೀಡಿರುವುದನ್ನು ಅಭಿಮಾನಿಗಳಿಗೆ ನೀಡುತ್ತೇನೆ ಎಂದು ವಿಷ್ಣುವರ್ಧನ್ ಹೇಳುತ್ತಿದ್ದರು. ಅದರಂತೆ ಜೀವನದಲ್ಲಿ ಕೊಟ್ಟ ದಾನ, ಧರ್ಮ ಎಂದಿಗೂ ಅವರು ಹೇಳಲಿಲ್ಲ ಎಂದು ಸ್ಮರಿಸಿದರು.</p><p>ಈ ವೇಳೆಯಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್. ಎನ್. ರಾಜೇಶ್, ಸಿದ್ದಪ್ಪ, ಮದನ್, ಬಸವರಾಜು, ಮಹದೇವ್, ಸಂತೋಷ್, ನವೀನ್, ಅಭಿಮಾನಿಗಳು ಹಾಗೂ ನೂರಾರು ಆಟೋ ಚಾಲಕರು ಇದ್ದರು.</p><p>ಇದನ್ನೂ ಓದಿ: ಸಿನಿಮಾಕಾನ್ನಲ್ಲಿ 9 ನಿಮಿಷಗಳ 'ಟಾಕ್ಸಿಕ್' ಪ್ರಿವ್ಯೂವ್ ಅನಾವರಣ: ಯಶ್ ಇಂಟೆನ್ಸ್ ಲುಕ್ಗೆ ವೀಕ್ಷಕರು ಫಿದಾ</a> </p>
