Surprise Me!

ವಿಜಯನಗರ: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಸದ್ಧರ್ಮ ಪೀಠದ ಮಹಾ ರಥೋತ್ಸವ

2026-04-22 3 Dailymotion

<p>ವಿಜಯನಗರ: ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಂಗಳವಾರ ಸಂಜೆ ಸಹಸ್ರಾಸು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.</p><p>ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಅರ್ಚಕರ ತಂಡ ಸ್ವಾಮಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.</p><p>ದೇವಸ್ಥಾನದ ಆವರಣದಲ್ಲಿ ಹೋಮ-ಹವನ ಹಾಗೂ ವಿವಿಧ ಪೂಜಾ ವಿಧಿಗಳು ಸ್ವಾಮೀಜಿಯ ನೇತೃತ್ವದಲ್ಲಿ ಜರುಗಿತು. ಪೀಠದ ಪರಂಪರೆಯಂತೆ ಭಾವೈಕ್ಯತೆಯ ಪ್ರತೀಕವಾಗಿ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರು ಭಕ್ತರೊಂದಿಗೆ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ಬಳಿಕ ದರ್ಗಾಕ್ಕೂ ಭೇಟಿ ನೀಡಿ ಸಾಮರಸ್ಯದ ಸಂದೇಶ ಸಾರಿದರು.</p><p>ಸಂಜೆ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯದೊಂದಿಗೆ ತೇರುಬಯಲಿಗೆ ತರಲಾಯಿತು. ಪಲ್ಲಕ್ಕಿ ಉತ್ಸವ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ, ಅರ್ಚಕರು ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದರು.</p><p>ಇದಾದ ಬಳಿಕ ಭಕ್ತರು 'ಮರುಳಸಿದ್ದೇಶ್ವರ ಮಹಾರಾಜರಿಗೆ ಜೈ' ಎಂದು ಘೋಷಣೆ ಕೂಗುತ್ತಾ ಭಕ್ತಿಭಾವದಿಂದ ರಥ ಎಳೆಯಲು ಪ್ರಾರಂಭಿಸಿದರು. ತೇರಿನ ಚಕ್ರಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು, ಉತ್ತತ್ತಿ ಹಾಗೂ ದವನ ಸಮರ್ಪಿಸಿದರು.</p><p>ರಥ ಪಾದಗಟ್ಟೆ ತಲುಪಿ ಗೋದೂಳಿ ಮುಹೂರ್ತದಲ್ಲಿ ಮೂಲಸ್ಥಾನಕ್ಕೆ ಮರಳುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಾಜ್ಯ, ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.</p><p>ಇದನ್ನೂ ಓದಿ: ದಾಸಯ್ಯನ ಕುಣಿತ: ಹೆಣ್ಣು ಮಕ್ಕಳ ವೇಷ, ನಕ್ಕು ನಗಿಸುವ ಯುವಕರು- ವಿಡಿಯೋ - DASAYYANA KUNITHA</a></p>

Buy Now on CodeCanyon