<p>ವಿಜಯನಗರ: ರಾಜ್ಯದಲ್ಲಿ ಮುಂಗಾರು ಮಳೆ ಕೆಲವು ಕಡೆ ಕೈಕೊಟ್ಟಿದ್ದು, ಅನ್ನದಾತರು ಆಕಾಶದ ಕಡೆ ಮುಖ ಮಾಡಿ ಕೂರುವಂತಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ಭಕ್ತರು ಹಾಗೂ ದೈವಸ್ಥರು ಕಪ್ಪೆ ಮತ್ತು ಕತ್ತೆಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿ ಮಳೆಗಾಗಿ ದೇವರಿಗೆ ಮೊರೆ ಇಟ್ಟಿದ್ದಾರೆ.</p><p>ಕೂಡ್ಲಿಗಿ ತಾಲೂಕಿನ ಅನೇಕ ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ಬಿತ್ತನೆ ಮಾಡಿದ್ದ ಜೋಳ, ಎಳ್ಳು, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಈಗ ಒಣಗುವ ಹಂತಕ್ಕೆ ಬಂದು ತಲುಪಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಆತಂಕದಲ್ಲಿರುವ ರೈತರು ಮತ್ತು ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ದೈವಸ್ಥರು, ಮಳೆಗಾಗಿ ಈ ವಿಭಿನ್ನ ಆಚರಣೆ ಮಾಡಿದ್ದಾರೆ.</p><p>ಶುಕ್ರವಾರ ಪೇಟೆ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದ ಮಹಿಳೆಯರು, ದೇವಸ್ಥಾನದ ಮುಂದೆ ರಂಗೋಲಿ ಹಾಕಿ ಮಡಕೆಯಲ್ಲಿ ಕಳಸ ಹಾಗೂ ಗುರ್ಜಿಯನ್ನು ಪ್ರತಿಷ್ಠಾಪಿಸಿದರು. ನಂತರ ಎರಡು ಕಪ್ಪೆಗಳಿಗೆ ನೀರೆರೆದು, ಅರಿಶಿನ-ಕುಂಕುಮ ಹಚ್ಚಿ ಸಿಂಗರಿಸಲಾಯಿತು. ಇತ್ತ ಪುರುಷರು ಎರಡು ಕತ್ತೆಗಳನ್ನು ತಂದು, ಹೆಣ್ಣು ಕತ್ತೆಗೆ ಸೀರೆ ಉಡಿಸಿ ಉಡಿ ತುಂಬಿದರೆ, ಗಂಡು ಕತ್ತೆಗೆ ಪಂಚೆ, ಟವೆಲ್ ಹಾಕಿ, ಕಂಕಣ ಕಟ್ಟಿ ಹೂವಿನ ಹಾರ ಹಾಕಿ ಅಪ್ಪಟ ಮದುಮಕ್ಕಳಂತೆ ರೆಡಿ ಮಾಡಿದರು. ನೆರೆದಿದ್ದ ಮಹಿಳೆಯರು ಮಂಗಳಾರತಿ ಬೆಳಗಿ, ಶಾಸ್ತ್ರೋಕ್ತವಾಗಿ ಇವುಗಳ ಕಲ್ಯಾಣ ಮಹೋತ್ಸವ ನೆರವೇರಿಸಿದರು.</p><p>ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆಯೇ ಸಕಲ ವಾದ್ಯ-ಮೇಳಗಳೊಂದಿಗೆ ಕಪ್ಪೆ ಹಾಗೂ ಕತ್ತೆಗಳ ಭವ್ಯ ಮೆರವಣಿಗೆಯನ್ನು ಇಡೀ ಪಟ್ಟಣದಲ್ಲಿ ನಡೆಸಲಾಯಿತು. "ಮುಂಗಾರಿನಲ್ಲಿ ಮಳೆ ಕೈಕೊಟ್ಟಾಗ, ಅನಾದಿ ಕಾಲದಿಂದಲೂ ಈ ರೀತಿ ಕಪ್ಪೆ ಹಾಗೂ ಕತ್ತೆಗಳ ಮದುವೆ ಮಾಡಿದರೆ ಖಂಡಿತ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ನಮ್ಮದಾಗಿದೆ" ಎನ್ನುತ್ತಾರೆ ಇಲ್ಲಿನ ಹಿರಿಯರು.</p><p>ಇದನ್ನೂ ನೋಡಿ: ಗುಜರಾತ್ನಲ್ಲಿ ಭಾರಿ ಮಳೆ: ಬಂಡೆಗಳ ಕೆಳಗೆ ಸಿಲುಕಿದ ನಾಲ್ವರು ಯಾತ್ರಿಕರು, ಇಬ್ಬರು ಸಾವು</a></p>
