<p>ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಎರಡು ಲಾರಿಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಲಾರಿಗಳೆರಡು ಸುಟ್ಟು ಕರಕಲಾಗಿವೆ.</p><p>ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಲಾರಿ ಮತ್ತು ಹಾಲಿನ ಟ್ಯಾಂಕರ್ ಹೊತ್ತಿ ಉರಿದಿವೆ. ಅದೃಷ್ಟವಶಾತ್ ಚಾಲಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p><p>ಬೆಳಗಾವಿಯಿಂದ ಗೋವಿನ ಜೋಳ ಮೂಟೆ ತುಂಬಿಕೊಂಡು ಲಾರಿ ಬರುತ್ತಿತ್ತು. ಅದೇ ಮಾರ್ಗದಲ್ಲಿ ವೇಗವಾಗಿ ಹಾಲಿನ ಟ್ಯಾಂಕರ್ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ವಾಹನಗಳೆರಡು ಬೆಂಕಿಗೆ ಆಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಪಾರ ಪ್ರಮಾಣದ ಹಾಲು ಮತ್ತು ಗೋವಿನಜೋಳ ಸಂಪೂರ್ಣವಾಗಿ ಹಾನಿಯಾಗಿದೆ. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.</p><p>ಘಟನೆಯಿಂದ ಒಂದು ಗಂಟೆಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಸರ್ವಿಸ್ ರಸ್ತೆಯಲ್ಲಿ ವಾಹನಗಳು ಓಡಾಡಲು ಪೊಲೀಸರು ಅನುವು ಮಾಡಿಕೊಟ್ಟರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.</p><p>ಇದನ್ನೂ ನೋಡಿ: ದೇವನಹಳ್ಳಿ: ಟ್ರ್ಯಾಕ್ಟರ್, ಬೊಲೆರೋಗೆ ಲಾರಿ ಡಿಕ್ಕಿ; ಸರಣಿ ಅಪಘಾತದ ಭೀಕರ ದೃಶ್ಯ</a></p>
