<p>ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಸವಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.</p><p>ಗ್ರಾಮದ ಸುತ್ತಮುತ್ತ ಚಿರತೆಯ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಸವಪುರ ಗ್ರಾಮದ ಸಲೀಂ ಅವರಿಗೆ ಸೇರಿದ ಜಮೀನಿನ ಸರ್ವೇ ನಂ. 4/6ರಲ್ಲಿ ಬೋನು ಇಟ್ಟಿತ್ತು. ಇದೀಗ ಸುಮಾರು ಎರಡು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲ್ಲಿದ್ದಾರೆ.</p><p>ಜಮೀನಿಗೆ ಬಂದ ಚಿರತೆ ಸೈರನ್ ಸದ್ದಿಗೆ ಪರಾರಿ: ಜಮೀನಿಗೆ ಬಂದಿದ್ದ ಚಿರತೆ ಸೈರನ್ ಸದ್ದಿಗೆ ದಿಗಿಲುಗೊಂಡು ಓಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದಲ್ಲಿ ನಡೆದಿದೆ. ಕೂತನೂರಿನ ಜಮೀನೊಂದಕ್ಕೆ ಚಿರತೆಯೊಂದು ಬಂದ ವೇಳೆ ಮೋಷನ್ ಸೆನ್ಸಾರ್ ಕ್ಯಾಮರಾವು ಸೈರನ್ ಮೊಳಗಿಸಿದ್ದು. ದಿಢೀರನೇ ಶಬ್ಧ ಬಂದ ಹಿನ್ನೆಲೆ ಗಲಿಬಿಲಿಗೊಂಡ ಚಿರತೆ ಕಾಲ್ಕಿತ್ತಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.</p><p>ದಿಂಬಂ ತಡೆಗೋಡೆ ಮೇಲೆ ಚಿರತೆ ರಿಲಾಕ್ಸ್: ಯಾವುದೇ ಅಂಜಿಕೆ, ಚಿಂತೆ ಇಲ್ಲದೇ ಚಿರತೆಯೊಂದು ತಡೆಗೋಡೆ ಮೇಲೆ ಕುಳಿತು ರಿಲಾಕ್ಸ್ಗೆ ಜಾರಿದ ಘಟನೆ ದಿಂಬಂ ಘಟ್ಟದಲ್ಲಿ ಗುರುವಾರ ನಡೆದಿದ್ದು ಈ ವೀಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.</p><p>ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗವಾದ ದಿಂಬಂನಲ್ಲಿ ಕಳೆದ ಹಲವು ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದೆ. ಆದರೆ, ವಾಹನಗಳ ಓಡಾಟದ ನಡುವೆಯೂ ಚಿರತೆ ಚಿಂತೆ ಇಲ್ಲದೇ ಕುಳಿತಿದ್ದು ಗಮನ ಸೆಳೆದಿದೆ. ಜೊತೆಗೆ, ವಾಹನ ಸವಾರರಲ್ಲಿ ಆತಂಕವನ್ನು ಉಂಟು ಮಾಡಿದೆ. </p><p>ಇದನ್ನೂ ಓದಿ: ಚಾಮರಾಜನಗರ: ಮನೆ ಮುಂದೆ ಕುಳಿತಿದ್ದ ಅಜ್ಜಿ, 4 ವರ್ಷದ ಮೊಮ್ಮಗಳ ಮೇಲೆ ಚಿರತೆ ದಾಳಿ; ಬದುಕುಳಿದಿದ್ದೇ ಪವಾಡ</a></p>
