<p>ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಘಟನೆ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ಸಂಭವಿಸಿದೆ.</p><p>ಕೆಮ್ಮಣ್ಣು ನಿವಾಸಿ ಗೋಪಾಲಕೃಷ್ಣ (65) ಹಾಗೂ ಶ್ಯಾಮಲಾ (60) ರಕ್ಷಿಸಲ್ಪಟ್ಟ ದಂಪತಿ. ಶ್ಯಾಮಲಾ ಮನೆ ಸಮೀಪದ ಬಾವಿಯ ಬಳಿ ಹೋದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಅವರ ಪತಿ ಗೋಪಾಲಕೃಷ್ಣ ಪತ್ನಿಯನ್ನು ರಕ್ಷಿಸಲು ಬಾವಿಗೆ ಹಾರಿದರೆಂದು ತಿಳಿದುಬಂದಿದೆ. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಗೆ ಬಿದ್ದ ದಂಪತಿಯನ್ನು ಹಗ್ಗದ ನೆರವಿನೊಂದಿಗೆ ಮೇಲಕ್ಕೆತ್ತಿದ್ದಾರೆ. </p><p>ತೀವ್ರವಾಗಿ ಅಸ್ವಸ್ಥಗೊಂಡ ದಂಪತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ಯಾಮಲಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.</p><p>ಈಶ್ವರ್ ಮಲ್ಪೆ: ಕೆಮ್ಮಣ್ಣು ಎಂಬಲ್ಲಿ ಇಬ್ಬರು ಬಾವಿಗೆ ಬಿದ್ದ ವಿಷಯವನ್ನು ಯಾರೋ ನಮಗೆ ಫೋನ್ ಮೂಲಕ ತಿಳಿಸಿದರು. ತಕ್ಷಣ ಸ್ಥಳಕ್ಕೆ ಹೋದೆ. ಅಲ್ಲಿ ವಯಸ್ಸಾದ ಇಬ್ಬರು ಬಾವಿಗೆ ಬಿದ್ದಿದ್ದರು. ಕೂಡಲೇ ಅಗ್ನಿಶಾಮಕ ದಳದವರ ಜೊತೆ ಸೇರಿ ಅವರಿಬ್ಬರನ್ನೂ ಬಾವಿಯಿಂದ ಹೊರಕ್ಕೆ ತೆಗೆದೆವು. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇವೆ. ಆದರೆ, ಶ್ಯಾಮಲಾ ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ಸಮಾಜಸೇವಕ ಈಶ್ವರ್ ಮಲ್ಪೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.</p><p>ಇದನ್ನೂ ಓದಿ: ಕಲಬುರಗಿ: ಕಾರಿನ ಡಿಕ್ಕಿಯಲ್ಲಿ ಸಿಲುಕಿ ಮೂರೂವರೆ ವರ್ಷದ ಬಾಲಕ ದಾರುಣ ಸಾವು</a></p>
